ನೀತಿ ಆಯೋಗದ ಡೆಲ್ಟಾ ರ್‍ಯಾಂಕ್‌ನಲ್ಲಿ ಕಾಳಗಿ ತಾಲೂಕು

KannadaprabhaNewsNetwork | Published : Aug 29, 2024 12:45 AM

ಸಾರಾಂಶ

ಶಿಕ್ಷಣ, ಆರೋಗ್ಯ, ಕೌಶಲ್ಯ, ಮಹಿಳಾ ಮತ್ತು ಮಕ್ಕಳ, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ತಾಲೂಕುಗಳಿಗೆ ಇತ್ತೀಚೆಗೆ ನೀತಿ ಆಯೋಗವು ಡೆಲ್ಟಾರ‍್ಯಾಂಕ್- 2024 ಘೋಷಿಸಿದ್ದು, ದಕ್ಷಿಣ ಭಾರತ ವಲಯದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶಿಕ್ಷಣ, ಆರೋಗ್ಯ, ಕೌಶಲ್ಯ, ಮಹಿಳಾ ಮತ್ತು ಮಕ್ಕಳ, ಕೃಷಿ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ತಾಲೂಕುಗಳಿಗೆ ಇತ್ತೀಚೆಗೆ ನೀತಿ ಆಯೋಗವು ಡೆಲ್ಟಾರ‍್ಯಾಂಕ್- 2024 ಘೋಷಿಸಿದ್ದು, ದಕ್ಷಿಣ ಭಾರತ ವಲಯದಡಿ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಯಶಸ್ವಿಯಾಗಿದೆ.

ಒಟ್ಟಾರೆ 500 ತಾಲೂಕಿನಲ್ಲಿ ಒಟ್ಟಾರೆ ಕಾರ್ಯಕ್ಷಮತೆ ವಿಭಾಗದಡಿ ಪ್ರಥಮ, ದ್ವಿತೀಯ ಹಾಗೂ 6 ವಲಯಗಳಲ್ಲಿ ಪ್ರಥಮ, ದ್ವಿತೀಯ ರ‍್ಯಾಂಕ್ ಘೋಷಣೆ ಮಾಡಲಾಗಿದೆ. ಇದರಲ್ಲಿ ದಕ್ಷಿಣ ಭಾರತ ವಲಯದಡಿ ಆಂಧ್ರ ಪ್ರದೇಶದ ಭಾಮಿನಿ ತಾಲೂಕು ಪ್ರಥಮ ಸ್ಥಾನ ಗಳಿಸಿದರೆ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕು ಎರಡನೇ ರ‍್ಯಾಂಕ್ ಪಡೆಯಲು ಸಫಲವಾಗಿದೆ.

ಕೇಂದ್ರದ ನೀತಿ ಆಯೋಗವು ದೇಶದಾದ್ಯಂತ 500 ಹಿಂದುಳಿದ ಬ್ಲಾಕುಗಳನ್ನು ಮಹತ್ವಾಕಾಂಕ್ಷೆ ತಾಲೂಕುಗಳೆಂದು ಗುರುತಿಸಿ ಇಲ್ಲಿ ಶಿಕ್ಷಣ, ಆರೋಗ್ಯ, ಕೌಶಲ್ಯ, ಅಪೌಷ್ಟಿಕತೆ ನಿವಾರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ಮೂಲಸೌಕರ್ಯ ಬಲವರ್ಧನೆ ಸೇರಿದಂತೆ ಜನರ ಜೀವನ ಮಟ್ಟದ ಸುಧಾರಣೆಗೆ ಪ್ರಸಕ್ತ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರಲು ಒತ್ತು ನೀಡುತ್ತಿದೆ. ವಿಶೇಷವಾಗಿ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಮತ್ತು ಜನರ ಭಾಗೀದಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಕಲಬುರಗಿ ಜಿಲ್ಲೆಯ ಅಫಜಲ್ಪುರ, ಶಹಾಬಾದ ಹಾಗೂ ಕಾಳಗಿ ಮೂರು ತಾಲೂಕುಗಳನ್ನು ಮಹತ್ವಕಾಂಕ್ಷೆ ತಾಲೂಕುಗಳೆಂದು ಗುರುತಿಸಲಾಗಿತ್ತು. ಇದೀಗ ಕಾಳಗಿ ತಾಲೂಕಿನ ಪ್ರಗತಿಗೆ ನೀತಿ ಆಯೋಗ ರ‍್ಯಾಂಕ್ ಘೋಷಿಸಿರುವುದರಿಂದ ಜಿಲ್ಲೆ ಮತ್ತು ರಾಜ್ಯದ ಕೀರ್ತಿ ಹೆಚ್ಚಿಸಿದೆ. ಶೀಘ್ರದಲ್ಲಿಯೇ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲೆಯ ಅಧಿಕಾರಿಗಳನು ಆಹ್ವಾನಿಸಿ ಅಧಿಕೃತವಾಗಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.

ಹೆಚ್ಚಿನ ಅನುದಾನ ನಿರೀಕ್ಷೆ:

ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಪಡೆದಿರುವುದರಿಂದ ಕಾಳಗಿ ತಾಲೂಕಿಗೆ ಕೇಂದ್ರದಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಅನುದಾನ ಹರಿದು ಬಂದಲ್ಲಿ ಅದು ತಾಲೂಕಿನ ಪ್ರಗತಿಗೆ ವರವಾಗಲಿದೆ.

ಅಭಿನಂದನೆ ಸಲ್ಲಿಸಿದ ಡಿ.ಸಿ:

ಕಾಳಗಿ ತಾಲೂಕಿನಲ್ಲಿ ಕಾರ್ಯಕ್ರಮಗಳ ಉತ್ತಮ ನಿರ್ವಹಣೆಗೆ ನೀತಿ ಆಯೋಗದಿಂದ ಎರಡನೇ ರ‍್ಯಾಂಕ್ ಘೋಷಿಸಿರುವುದಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾಳಗಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮುಖ್ಯ ಯೋಜನಾಧಿಕಾರಿ ಮತ್ತು ಎ.ಬಿ.ಪಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಶರಣಯ್ಯ ಎಸ್. ಮಠಪತಿ, ತಾಲೂಕಿನ ಎ.ಬಿ.ಪಿ. ಫೆಲೋ ಶಿವರಾಜ ಹೋಳ್ಕರ್ ಸೇರಿದಂತೆ ಇಡೀ ತಾಲೂಕು ಆಡಳಿತ ಎಲ್ಲಾ ಅಧಿಕಾರಿ-ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿರುವ ಅವರು, ಮುಂದೆಯೂ ಇದೇ ರೀತಿಯಲ್ಲಿ ಅಫಜಲಪೂರ ಮತು ಶಹಾಬಾದ ತಾಲೂಕುಗಳು ಸಹ ರ‍್ಯಾಂಕ್ ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Share this article