ಕನ್ನಡಪ್ರಭ ವಾರ್ತೆ, ಚಾಮರಾಜನರ
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಡಾ. ಅಬ್ದುಲ್ ಕಲಾಂ ಫೌಂಡೇಷನ್ ಅಕ್ರಮದ ಬಗ್ಗೆ ಕೆಲ ತಿಂಗಳು ಕನ್ನಡಪ್ರಭ ವರದಿ ಮಾಡಿದ್ದರೂ ಏಕೆ ಅಕ್ರಮವನ್ನು ತಡೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲಿ, ಡಿಡಿಪಿಐ ಅವರಾಗಲಿ ಮುಂದಾಗಿಲ್ಲ ಎಂದು ಇಬ್ಬರನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಡಿಡಿಪಿಐ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಈಗ ನೋಟಿಸ್ ಜಾರಿ ಮಾಡಿದರೆ ಏನು ಪ್ರಯೋಜನ? ಕನ್ನಡಪ್ರಭ ಪತ್ರಿಕೆ ಕೆಲ ತಿಂಗಳುಗಳ ಹಿಂದೆಯೇ ವರದಿ ಪ್ರಕಟಿಸಿತ್ತು. ಏಕೆ ವರದಿಯನ್ನು ಗಂಭೀರವಾಗಿಪರಿಗಣಿಸಲಿಲ್ಲ, ನೀವು ಎಚ್ಚೇತ್ತುಕೊಂಡಿದ್ದರೆ ಹಲ ಬಡ ನಿರುದ್ಯೋಗಿಗಳು ಹಣ ಕಳೆದುಕೊಳ್ಳುವುದು ತಪ್ಪುತ್ತಿತ್ತು. ನೀವು ಕ್ರಮಕೈಗೊಳ್ಳದ ಪರಿಣಾಮ ಹಲವರು ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಡಾ. ಅಬ್ದುಲ್ ಕಲಾಂ ಫೌಂಡೇಷನ್ ಮೂಲಕ ಸರ್ಕಾರಿ ಶಾಲೆಗಳಿಗೆ ಯೋಗ ಶಿಕ್ಷಕರು ಮತ್ತು ಗಣಕ ಯಂತ್ರ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ತರಾಟೆಗೆ ತೆಗೆದುಕೊಂಡರು. ಶಾಸಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಡಿಡಿಪಿಐ ತಬ್ಬಿಬಾದರು.
ಈಗಾಗಲೇ ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಶಿಕ್ಷಣ ಸಚಿವರು ಜಂಟಿ ನಿರ್ದೇಶಕರನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದು, ತನಿಖೆ ನಡೆಯುತ್ತಿದ್ದು, ತಪ್ಪಿತಸ್ಧರಿಗೆ ಶಿಕ್ಷೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರ ಗಮನಕ್ಕೆ ತಂದರು.