ಮಲ್ಪೆ: ಇಲ್ಲಿನ ಕಲ್ಮಾಡಿಯಲ್ಲಿರುವ ಸ್ಟೆಲ್ಲಾ ಮಾರಿಸ್ ದೇವಾಲಯದ ವೆಲಂಕಣಿ ಆರೋಗ್ಯ ಮಾತೆಯ ಪ್ರತಿಷ್ಠಾಪನೆಯ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ 9 ದಿನಗಳ ನೊವೆನಾ ಪ್ರಾರ್ಥನೆಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ನಂತರ ಅವರು ತಮ್ಮ ಪ್ರವಚನದಲ್ಲಿ, ಕ್ರೈಸ್ತ ವಿಶ್ವಾಸಿಗಳು ತಮ್ಮ ಉತ್ತಮ ನಡೆ, ಪ್ರೀತಿ, ಮತ್ತು ಸಹಾಯದ ಹಸ್ತದ ಮೂಲಕ ಕ್ರಿಸ್ತನ ಬೆಳಕನ್ನು ಜಗತ್ತಿಗೆ ತೋರಿಸಬೇಕಾಗಿದೆ. ಶಿಲುಬೆಯು ಯೇಸುಕ್ರಿಸ್ತನ ತ್ಯಾಗ, ಕ್ಷಮೆ ಮತ್ತು ಅನಾದಿ ಪ್ರೀತಿಯ ಸಂಕೇತವಾಗಿದೆ. ಪ್ರತಿನಿತ್ಯ ದೇವರ ವಾಕ್ಯವನ್ನು ಓದುವುದು ದೇವರೊಂದಿಗೆ ಸಂವಹನ ನಡೆಸಲು ಇರುವ ಪ್ರಮುಖ ಮಾರ್ಗವಾಗಿದೆ. ಮೇರಿ ಮಾತೆ ಯೇಸು ಸ್ವಾಮಿಯ ಮೂಲಕ ದೇವರ ಕೆಲಸಗಳನ್ನು ಕಾರ್ಯರೂಪಗೊಳಿಸಿದ್ದು, ಅವರ ಜೀವನದ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗೋಣ ಎಂದರು. ಪವಿತ್ರ ಬಲಿಪೂಜೆ ವೇಳೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ರೆಕ್ಟರ್ ವಂ.ಡಾ. ಬ್ಯಾಪ್ಟಿಸ್ಟ್ ಮಿನೇಜಸ್, ಬ್ರಹ್ಮಾವರ ಚರ್ಚಿನ ಧರ್ಮಗುರು ವಂ| ಜೋನ್ ಪರ್ನಾಂಡಿಸ್, ಚರ್ಚಿನ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಫರ್ನಾಂಡಿಸ್, ಕಾರ್ಯದರ್ಶಿ ಪ್ರೆಸಿಲ್ಲಾ ಆಳ್ವಾ, ಆಯೋಗಗಳ ಸಂಯೋಜಕರ ಡೆನಿಸ್ ಲಸ್ರಾದೊ ಹಾಗೂ ಚರ್ಚಿನ ಮಹೋತ್ಸವ ಆಚರಣಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.9 ದಿನಗಳ ಪ್ರಾರ್ಥನೆಯಲ್ಲಿ ಭಕ್ತಾದಿಗಳಿಗಾಗಿ, ದಂಪತಿಗಳಿಗಾಗಿ, ದಾನಿಗಳಿಗಾಗಿ, ಯುವಜನರಿಗಾಗಿ, ಯಾಜಕರು ಮತ್ತು ಧಾರ್ಮಿಕರಿಗಾಗಿ, ವಯೋವೃದ್ಧರಿಗಾಗಿ, ರೋಗಿಗಳಿಗಾಗಿ, ಕುಟುಂಬಗಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ಆ. 13ರಂದು ಮಧ್ಯಾಹ್ನ 2.54 ಕ್ಕೆ ಆದಿ ಉಡುಪಿ ಜಂಕ್ಷನ್ನಿಂದ ಚರ್ಚಿನ ತನಕ ವೆಲಂಕಣಿ ಮಾತೆಯ ಮೆರವಣಿಗೆ ನಡೆಯಲಿದ್ದು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರು ವಂ| ಫ್ರಾಂಕ್ಲಿನ್ ಡಿಸೋಜ ಚಾಲನೆ ನೀಡಲಿದ್ದಾರೆ. ಆ. 15 ರ ಬೆಳಗ್ಗೆ 10.30ಕ್ಕೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ನೆರೆವೇರಿಸುವರು. ಉಡುಪಿ ಧರ್ಮಪ್ರಾಂತದ ಅನೇಕ ಧರ್ಮ ಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.