13ನೇ ಹಲಸಿನ ಮೇಳ ಉದ್ಘಾಟಿಸಿದ ಶಾಸಕ
ಹಲಸು ಕೇವಲ ಹಣ್ಣಲ್ಲ, ಅದು ರೈತರ ಆರ್ಥಿಕತೆ ಬಲಪಡಿಸುವ ಕಲ್ಪವೃಕ್ಷ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು.
ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ, ಉ.ಕ. ಸಾವಯವ ಒಕ್ಕೂಟ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜೀವ ವೈವಿಧ್ಯ ಮಂಡಳಿ, ತೋಟಗಾರಿಕಾ, ಕೃಷಿ, ಅರಣ್ಯ ಇಲಾಖೆ, ವನಸ್ತ್ರೀ ಸಂಸ್ಥೆ ಇವುಗಳ ಆಶ್ರಯದಲ್ಲಿ ಕದಂಬ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ 13ನೇ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹಲಸಿನ ತಳಿಗಳು ಮತ್ತು ಅದರಿಂದ ಸಿದ್ಧಪಡಿಸುವ ಉಪ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ರೈತರು ಇಂತಹ ಮೇಳಗಳ ಸದುಪಯೋಗ ಪಡಿಸಿಕೊಂಡು, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಸಲಹೆಗಾರ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಮೊದಲನೇ ದಿನದ ಹಲಸಿನ ಮೇಳದಲ್ಲಿ ಸಾವಿರಾರು ಜನ ಸಾರ್ವಜನಿಕರು ಭಾಗವಹಿಸುವ ಮೂಲಕ ಈ ಹಲಸಿನ ಮೇಳಕ್ಕೆ ಸಾಕ್ಷಿಯಾದರು.
ಮಾರ್ಕೆಟಿಂಗ್ ಸಂಸ್ಥೆಯ ಪದಾಧಿಕಾರಿಗಳು, ಪ್ರಮುಖ ಜನಪ್ರತಿನಿಧಿಗಳು, ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಮತ್ತು ರೈತರು ಉಪಸ್ಥಿತರಿದ್ದರು.