ಹೆಬ್ರಿ: ಉಡುಪಿಯ ಯಕ್ಷಗಾನ ಕಲಾರಂಗ ತನ್ನ ‘ವಿದ್ಯಾಪೋಷಕ್’ ಯೋಜನೆಯಡಿ ಶಿವಪುರ ಕಲ್ಮುಂಡದಲ್ಲಿ ನಿರ್ಮಿಸಿದ 100ನೇ ಮನೆ ‘ಶತಸ್ಕೃತಿ’ಯನ್ನು ವಿದ್ಯಾಪೋಷಕ್‌ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಅವರಿಗೆ ಭಾನುವಾರ ಹಸ್ತಾಂತರಿಸಲಾಯಿತು.ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯ ಕುಮಾರ್ ಸರಳತ್ತಾಯ ಮನೆ ಉದ್ಘಾಟಿಸಿ, ಶಿಕ್ಷಣದೊಂದಿಗೆ ಸೂರು ಕಲ್ಪಿಸುವ ಸಂಸ್ಥೆಯ ಯೋಜನೆ ಕೃಷ್ಣ ಪ್ರೀತಿಯ ಕಾರ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಯಕ್ಷಗಾನ ಶಿಕ್ಷಣದ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಯಕ್ಷಗಾನ ಕಲಾರಂಗ ಇತರ ಸಂಘ ಸಂಸ್ಥೆಗಳಿಗೆ ಮಾದರಿ ಎಂದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌, ಕಾರ್ಯದರ್ಶಿ ಮುರಳಿ ಕಡೆಕಾರ್, ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಳ್ಳಿ, ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಮಾಜಿ ಅಧ್ಯಕ್ಷ ಕೆ. ಗಣೇಶ ರಾವ್, ಗಾಂಧಿ ಆಸ್ಪತ್ರೆಯ ಡಾ. ಹರಿಶ್ಚಂದ್ರ ಮತ್ತಿತರರಿದ್ದರು.