ಉಡುಪಿ: ಇಲ್ಲಿನ ಪುರಾತನ ಕಾಡಬೆಟ್ಟು ಶ್ರೀ ಅಬ್ಬಗ ದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಳದ ಬ್ರಹ್ಮಕುಂಭಾಭಿಷೇಕ ಮಹೋತ್ಸವ 2027ರ ಫೆ.7ರಂದು ಜರುಗಲಿದೆ ಎಂದು ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.ದೇವಳದ ಸಮಗ್ರ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿರುವ ಹಿನ್ನೆಲೆಯಲ್ಲಿ ಶನಿತ್ರಯೋದಶಿ ಶುಭ ದಿನವಾದ ಶನಿವಾರ ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಸಾಮೂಹಿಕ ಶನಿ ಶಾಂತಿ, ಕ್ಷೇತ್ರದ ಎಲ್ಲ ದೇವರಿಗೆ ವಿಶೇಷ ಪೂಜೆ, ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ತರುವಾಯ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು ಶ್ರೀಗಳು ಪ್ರಕಟಿಸಿದರು.

ದೇವರು ದೀಪವಿದ್ದಂತೆ ನಮ್ಮ ಮನಸ್ಸಿನ ಕತ್ತಲನ್ನು ತೊಲಗಿಸುತ್ತಾನೆ, ಆದ ಕಾರಣ ದೇವರಲ್ಲಿ ನಿಶ್ಚಲ ಭಕ್ತಿ ಇರಿಸಿಕೊಂಡರೆ ನಮ್ಮೆಲ್ಲ ಸಂಕಷ್ಟಗಳು ದೂರವಾಗುತ್ತವೆ. ಶನೀಶ್ಚರ ಕಷ್ಟ ಕೊಡುವ ದೇವರು ಎಂಬ ತಪ್ಪು ಕಲ್ಪನೆ ಇದೆ. ಅದು ಸರಿಯಲ್ಲ. ಕಷ್ಟ ಕೊಡುವ ಮೂಲಕ ಭಕ್ತಿ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೇಪಿಸುವ ಶನೀಶ್ಚರ ಭಕ್ತರ ಸಕಲಾಭೀಷ್ಟಗಳನ್ನು ಕರುಣಿಸುವ ದೇವರಾಗಿದ್ದು, ಶನೀಶ್ಚರನ ಆರಾಧನೆಯಿಂದ ಶ್ರೇಯಸ್ಸು ಸಾಧ್ಯ ಎಂದು ಶ್ರೀಗಳು ಆಶೀರ್ವಚನ ನೀಡಿದರು.ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಹೊಸ ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಹಳೆ ದೇವಾಲಯದ ಜೀರ್ಣೋದ್ಧಾರ ಶ್ರೇಯಸ್ಕರ. ಊರಿನ ದೇವಳದ ಜೀರ್ಣೋದ್ಧಾರದಿಂದ ಸಮಸ್ತರಿಗೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆ ಹಿನ್ನೆಲೆಯಲ್ಲಿ ಸರ್ವರ ಸಹಕಾರ ಅಗತ್ಯ ಎಂದರು. ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನನ್ನ ವೈಯುಕ್ತಿಕ ಹಾಗೂ ಶಾಸಕನ ನೆಲೆಯಲ್ಲಿ ದೇವಾಲಯಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ನೆರೆದ ಭಕ್ತರೂ ಈ ಶ್ರೀದೇವರ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ವಿನಂತಿಸಿದರು.

ಕ್ಷೇತ್ರದ ಕೊರಂಗ್ರಪಾಡಿ ಕುಮಾರಗುರು ತಂತ್ರಿಯವರು ಬ್ರಹ್ಮಕಲಶೋತ್ಸವದ ಧಾರ್ಮಿಕ ಹಿನ್ನೆಲೆ, ಅದರ ಮಹತ್ವ ವಿವರಿಸಿದರು. ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ದೇವಳದ ಟ್ರಸ್ಟಿ ಪ್ರಕಾಶ ಶೆಟ್ಟಿ, ಉದ್ಯಮಿಗಳಾದ ಮನೋಹರ ಶೆಟ್ಟಿ ಮತ್ತು ಸುನಿಲ್ ಕೆ.ಆರ್., ಸಮಿತಿ ಉಪಾಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮೋಹನ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂಚಾಲಕ ಸುರೇಂದ್ರ ಶೆಟ್ಟಿ , ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ರೈ, ಟಿ.ಜಿ. ಹೆಗ್ಡೆ ಹಾಗೂ ವಿವಿಧ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಮಿತಿ ಸಂಚಾಲಕ ರಾಜಗೋಪಾಲ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ ಶೆಟ್ಟಿ ನಿರೂಪಿಸಿದರು.