- ಶೇಷಮೂರ್ತಿ ಅವಧಾನಿ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪರಿಕಲ್ಪನೆಯಲ್ಲಿ ಮೊದಲ ಬಾರಿ ಮೂಡಿಬಂದ ಕಲ್ಯಾಣ ಕರ್ನಾಟಕ ಉತ್ಸವ 2 ದಿನಗಳಲ್ಲಿ ಜನೋತ್ಸವವಾಗಿ ಕಂಗೊಳಿಸಿತು.*ಜನಮನಕ್ಕೆ ಹತ್ತಿರವಾಯ್ತು ಅಪ್ಪ ಕೆರೆ ಪರಿಸರ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಅಪ್ಪ ಕೆರೆ ಸುತ್ತ ಬಸವಾದಿ ಶರಣರ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಹಿಂದಿನ ಸರ್ಕಾರ 11 ಬೇ (ಸಿಮೆಂಟ್ ಕಾಂಕ್ರಿಟ್ ನಿಂದ ನಿರ್ಮಿಸಿದ ಕಟ್ಟೆಗಳು) ಮಾಡಿದಾಗ ಇದು ಕೆರೆ ಸಂರಚನೆಯ ಮೂಲ ತತ್ವಗಳಿಗೆ ಧಕ್ಕೆ ತಂದಿದೆ ಎಂಬ ಆಕ್ಷೇಪಣೆ ಕೇಳಿಬಂದಿತ್ತು. ಜತಗೆ ಕೆರೆ ಅಭಿವೃದ್ಧಿ ಪ್ರಾಧಿಕಾರವೂ ಈ ಕಾಮಗಾರಿಗೆ ಒಪ್ಪಿಗೆ ನೀಡದೆ ಸ್ಥಗಿತಗೊಳಿಸಿತ್ತು. ಇದು ಕೆರೆ ಮತ್ತು ಜೈವಿಕ ಪರಿಸರಕ್ಕೆ ಮಾರಕ ಎಂದು ಐಐಎಸ್ಸಿ ವರದಿ ಮಾಡಿತು.ವರದಿಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪರಿಹಾರಾತ್ಮಕ ಸಲಹೆ ಸಹ ಎಐಎಸಿ ನೀಡಿದಾಗ ಅದರ ಆಧಾರದ ಮೇಲೆ ಅಪ್ಪ ಕೆರೆ ಕಾಮಗಾರಿಗಳನ್ನು ಮಾಡಿ ಇದೀಗ ಕೆರೆಯ ಜತೆಗೇ ಸುತ್ತಲಿನ ಪರಿಸರವನ್ನೂ ಉಳಿಸಿದಂತಾಗಿದ್ದು, ಕೆರೆ ಇನ್ನೂ ಹೆಚ್ಚು ಜನಮನಕ್ಕೆ ಹತ್ತಿರವಾಗಿದೆ. ನೀರಿನ ಒಳ ಮತ್ತು ಹೊರ ಹರಿವಿನ ಸಮಸ್ಯೆ ಇದ್ದು, ಇದಕ್ಕಾಗಿ 3 ಕೋಟಿ ರು. ಅನುದಾನ ಮೀಸಲಿಟ್ಟು ಅಪ್ಪ ಕೆರೆ ಪರಿಸರದಲ್ಲಿ ಶುದ್ಧ ನೀರು ಹರಿದು ಬರುವಂತೆ ಮಾಡಲಾಗುತ್ತಿದೆ.ಹಿಂದೆ ಕಟ್ಟಿಟ್ಟಿದ್ದ ಸಿಮೆಂಟ್ ಬೇಗಳನ್ನೆ ಜನರ ಮೋರಂಜನೆಗೆ ಅನುಕೂಲವಾಗುವಂತೆ ಪರಿವರ್ತಿಸಲಾಗಿದ್ದು, ಇದರಿಂದಾಗಿ ಅಪ್ಪನ ಕೆರೆ ಸಂರಕ್ಷಣೆಯೂ ಆದಂತಾಗಿರುವುದರ ಜತೆಗೆ ಮನರಂಜನೆಗೂ ಅನೇಕ ಅವಕಾಶಗಳು ಒಟ್ಟಿಗೆ ತೆರೆದುಕೊಂಡಿವೆ.ಕಲ್ಯಾಣ ಕರ್ನಾಟಕ ಉತ್ಸವದಂಗವಾಗಿ ಮೆಹಬೂಬ್ ಗುಲಷನ್ ಪಬ್ಲಿಕ್ ಗಾರ್ಡನ್ನಲ್ಲಿ ಸ್ಥಳೀಯ, ರಾಜ್ಯದ ಇತರೆಡೆಯ ಕಲಾ ಪ್ರತಿಭೆಗಳಿಗೆ ಅವಕಾಶ ನೀಡಿ ಕಲಾ ಪ್ರದರ್ಶನ, ಶಾಸ್ತ್ರೀಯ ನೃತ್ಯ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು. ರಾತ್ರಿಯ ಸ್ಟ್ರೀಟ್ ಫೆಸ್ಟಿವಲ್, ಸವಾರಿ ಬ್ಯಾಂಡ್ ತಂಡದ ಸಂಗೀತ ಆಲಿಸಲು ಸಹಸ್ರಾರು ಜನ ಸೇರಿದ್ದು ವಿಶೇಷವಾಗಿತ್ತು.ಭೈರವ್ ತಂಡದಿಂದ ಇಂಡೋ-ಫ್ಯೂಷನ್ ವಾದ್ಯ ಪ್ರದರ್ಶನ, ಅಭಿವೃದ್ಧಿಯಾದ ಕೆರೆ, 3ಡಿ ಲೈಟ್ ಶೋ ಮತ್ತು ಡ್ರೋನ್ ಶೋ ನೋಡಲು, ಪಂಡಿತ್ ರಂಗಮಂದಿರದಲ್ಲಿನ ಗಣೇಶ ವಂದನೆ, ವಿವೇಕ ಮರಳಿಧರನ್ ಸ್ಟ್ಯಾಂಡಪ್ ಕಾಮಿಡಿ, ಸ್ಟೆಪ್ ಎನ್ ಸ್ಟೈಲ್ ತಂಡದಿಂದ ಸಮಕಾಲಿನ ನೃತ್ಯ, ಎಸ್.ಸೋನುವೇಣು ಗೋಪಾಲರ ಸ್ಟ್ಯಾಂಡಪ್ ಕಾಮಿಡಿ ಹಾಗೂ ಬೆಂಗಳೂರು ಮೂಲದ ಅಕೌಸ್ಟಿಕ್ ಸಾಗಾ ತಂಡದ ಬಹುಭಾಷಾ ಬ್ಯಾಂಡ್ಗಾಗಿ ಜನ ಧಾವಿಸಿ ಬಂದರು.ಪಬ್ಲಿಕ್ ಗಾರ್ಡನ್ನಲ್ಲಿ ನೃತ್ಯ, ಸುಗಮ ಸಂಗೀತ, ಸೃಷ್ಠಿ ಸ್ಟ್ಯಾಂಡಪ್ ಕಾಮಿಡಿ, ಝೀ ಕನ್ನಡ ಸರೆಗಮಪಾ ಸಂಗೀತ, ಬಾಣ ಬಿರುಸು ವೈಭವ, ಅಪ್ಪನ ಕೆರೆಯಲ್ಲಿ 2 ದಿನ ಪ್ರತಿ 30 ನಿಮಿಷಕ್ಕೊಮ್ಮೆ ಧ್ವನಿ ಬೆಳಕು, ಫುಡ್ ಕೋರ್ಟ್ ಹೆಚ್ಚು ಜನರನ್ನ ಸೆಳೆದವು.ಕಲ್ಯಾಣ ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ, ಇತಿಹಾಸ ಸಾರುವ ಜನೋತ್ಸವ ವಾತಾವರಣ ಮೂಡಿಸಬೇಕು. ಇದಕ್ಕಗಿ ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಯೋಗಗಳೊಂದಿಗೆ ನಾವು ಜನರಿಗೆ ಹತ್ತಿರವಾಗಲಿದ್ದೇವೆ. ಈ ಉತ್ಸವದ ಹಿನ್ನೆಲೆಯಲ್ಲಿ ಮೂಡಿ ಬರುವ ಅಭಿಪ್ರಾಯ ಆಲಿಸಿ ಸುದಾರಣೆಗಳೊಂದಿಗೆ ನಾವು ಹೊಸ ಹೆಜ್ಜೆ ಇಡುತ್ತೇವೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅಪ್ಪನ ಕೆರೆ, ಗಾರ್ಡನ್ ಸುತ್ತಮುತ್ತ ಉತ್ತಮ ಮನೋರಂಜನೆ, ಮಕ್ಕಳ ಆಕರ್ಷಣೆಯ ಡ್ರೋಣ್, ಲೇಸರ್, ಲೈಟ್, ಸಂಗೀತ ಶೋ, ಪ್ರವಾಸಿ ತಾಣಳ ಪರಿಚಯ ಮಾಲಿಕೆ ಕಣ್ಮನ ಸೆಳೆದವು. ಕೆರೆ ಪರಿಸರ ನಮ್ಮನ್ನು ಕೈಬೀಸಿ ಕರೆಯುವಂತಾಗಿದೆ. ಉತ್ಸವಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ದಟ್ಟಣೆ ನಿಭಾಯಿಸಲು ಪ್ರವೇಶದಲ್ಲೆಲ್ಲಾ ಬ್ಯಾರಿಕೇಡ್ ಹಾಕಿ ಜನ, ವಾಹನ ನಿಯಂತ್ರಣ ಮಾಡಿದ್ದರೆ ಮಕ್ಕಳೊಂದಿಗೆ ಕುಟುಂಬದವರು ಹೆಚ್ಚು ಆನಂದಿಸಬಹುದಿತ್ತು. ಆದಾಗ್ಯೂ ಮೊದಲ ಪ್ರಯತ್ನದಲ್ಲಿ ಇಷ್ಟೆಲ್ಲಾ ಮಾಡಿದ್ದು ಖುಷಿ ಕೊಟ್ಟಿದೆ. ಜಿಲ್ಲಾಡಳಿತ, ಸಚಿವ ಪ್ರಿಯಾಂಕ್ ಖರ್ಗೆ ಈ ಜನೋತ್ಸವವನ್ನು ಕಲಬುರಗಿ ಮಟ್ಟಿಗೆ ಹಾಗೇ ಮುಂದುವರಿಸಲಿ ಎಂದು ಕಲಬುರಗಿ ಸಮತಾ ಕಾಲೋನಿಯ ಗೃಹಿಣಿ ಶ್ರೀಲಕ್ಷ್ಮೀ ಅಕ್ಮಂಚಿ ಹೇಳಿದರು.