ಜಾತಿ, ಮತ, ಕುಲಗಳ ಭೇದ-ಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿದ ಕನಕದಾಸರು, ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ.
ಹುಬ್ಬಳ್ಳಿ:
ಸರ್ವಧರ್ಮಗಳು ಒಂದೇ ಎಂದು ತಿಳಿಸಿಕೊಟ್ಟವರು ಕನಕದಾಸರು. ಅವರ ಕೃತಿಗಳನ್ನು ಯುವ ಜನರು ಅಧ್ಯಯನ ನಡೆಸಬೇಕು. ದಾಸ ಸಾಹಿತ್ಯದ ಮೂಲಕ ಜೀವನದ ಪಾಠವನ್ನು ಸಾರಿದವರು ಕನಕದಾಸರು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿಯಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ದಾಸ ಶ್ರೇಷ್ಠ ಶ್ರೀಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಮತ, ಕುಲಗಳ ಭೇದ-ಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿದ ಕನಕದಾಸರು, ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ ಎಂದರು.
ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಮಾತನಾಡಿ, ದಾಸ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ ಕನಕದಾಸರು ಕರ್ನಾಟಕದ ಕೀರ್ತಿ. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕ ಡಾ. ಸಂಗಮೇಶ ಬಂಗಾರಿಮಠ ಮಾತನಾಡಿ, ಕನಕ ಎನ್ನುವುದು ಒಂದು ವ್ಯಕ್ತಿ ಅಲ್ಲ, ಅದೊಂದು ಅದಮ್ಯ ಹಾಗೂ ಅಗೋಚರ ಶಕ್ತಿ. ಜೀವನ ದರ್ಶನವನ್ನು ಕಟ್ಟಿ ಕೊಟ್ಟಂತಹ ಮಹಾನ ದಾಸರು ಇವರಾಗಿದ್ದರು. ದಾಸ ಪರಂಪರೆಯಲ್ಲೇ ಅತ್ಯಂತ ಮುಂಚೂಣಿಯಲ್ಲಿ ಇರುವಂಥವರು ಕನಕದಾಸರು. ವ್ಯಾಸರಾಯರಿಂದ ದೀಕ್ಷೆ ಪಡೆದು ಕೀರ್ತನೆ ರಚಿಸುವ ಮೂಲಕ ಒಬ್ಬ ಕವಿಯಾಗಿದ್ದರು. ಕವಿಯಾಗಿ ಕೀರ್ತನೆಗಳ ಜತೆಗೆ ಪದ್ಯವನ್ನು ರಚಿಸಿದ ಏಕೈಕ ವ್ಯಕ್ತಿ ಇವರು ಎಂದು ತಿಳಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸುವರ್ಣಾ, ಕೀರ್ತಿ, ಸ್ಪಂದನಾ, ಯಶೋಧಾ ಹಾಗೂ ಕವನಾ ನೃತ್ಯ ಪ್ರದರ್ಶನ ಮಾಡಿದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಜೆ.ಬಿ.ಮಜ್ಜಗಿ, ತಾಪಂ ಇಒ ಯಶವಂತಕುಮಾರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಚಂದ್ರಶೇಖರ ಕರವೀರಮಠ, ತಾಲೂಕು ಕೆಡಿಪಿ ಸದಸ್ಯ ಬಸವರಾಜ ಭೀರಣ್ಣವರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಭೂಮ್ಮನವರ, ಸಮಾಜದ ಮುಖಂಡರಾದ ಸಿದ್ದು ತೇಜಿ, ಹನುಮಂತ ದೊಡ್ಡಮನಿ, ಎಸ್.ಬಿ. ಅರ್ಜಿ, ಸಂಜೀವ ಧುಮಕನಾಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುಜಾಮಿಲ್ ಮುಜಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲಿಸಾಬ್ ನದಾಫ್ ನಿರೂಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಸುರೇಶ ಗುರಣ್ಣವರ ಸ್ವಾಗತಿಸಿದರು. ಪ್ರಭಾಕರ ಮೋಟಗಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.