ಉಳ್ಳಾಲ: ಕನಕದಾಸರಲ್ಲಿ ಮೌಢ್ಯದ ನಿರಾಕರಣೆ ಹಾಗೂ ವೈಚಾರಿಕ ಚಿಂತನೆಗಳಿವೆ. ಆದರೆ ಕೋಣ ಪ್ರಸಂಗ, ಕನಕನ ಕಿಂಡಿ ಮುಂತಾದ ಕಲ್ಪನೆಗಳನ್ನು ಪ್ರಚಾರಗೊಳಿಸುವ ಮೂಲಕ ಅವೈಚಾರಿಕ ಚಿಂತನೆಗಳನ್ನು ಬಿತ್ತರಿಸಲಾಗುತ್ತಿದೆ. ಉಡುಪಿಯಲ್ಲಿ ವ್ಯಾಸರಾಯರು ಕನಕದಾಸರಿಗೆ ಮೊದಲ ಪ್ರಸಾದ ನೀಡುತ್ತಿದ್ದರು ಎಂದು ಹರ್ಮನ್ ಮೋಗ್ಲಿಂಗ್ ದಾಖಲಿಸಿದ್ದಾರೆ ಎಂದು ಮೈಸೂರಿನ ವಿದ್ವಾಂಸರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.ಅವರುಮಂಗಳವಾರ ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ಮತ್ತು ನಾಲಂದ ಕಲಾ ಮತ್ತು ವಿಜ್ಞಾನ ಕಾಲೇಜು, ಪೆರ್ಲ ಇವರ ಸಹಯೋಗದೊಂದಿಗೆ ‘ಕನಕದಾಸರ ಸಾಹಿತ್ಯದಲ್ಲಿ ಸಾಮಾಜಿಕ ಪರಿಕಲ್ಪನೆ’ ಕುರಿತ ಕನ್ನಡ-ಮಲಯಾಳಂ ಉಭಯಭಾಷಾ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಕನಕದಾಸರ ಮೋಹನ ತರಂಗಿಣಿಯ ಕನಕ - ವಧೂಟಿಯರ ಸಂವಾದ ಮುದ್ದಣ - ಮನೋರಮೆ ಸಂವಾದಕ್ಕೆ ಪ್ರೇರಣೆಯಾಗಿದೆ. ಅವರ ರಾಮಧಾನ್ಯ ಚರಿತೆಯ ಕೊನೆಯಲ್ಲಿ ಬರುವ ಅತಿಹಿತದಲಿ ನೀವಿಹುದು ಎಂಬ ಮಾತು ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂಬುದನ್ನು ಸೂಚುಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಮೋಹನ ಕುಂಟಾರ್ ಕನಕದಾಸರು ಒಪ್ಪಿಕೊಳ್ಳದ ಆಶಯಗಳಿಗೆ ಅವರನ್ನು ಬಂಧಿಸುವ ಪ್ರಯತ್ನ ಇಂದು ಆಗುತ್ತಿದೆ. ಅದು ಸರಿಯಲ್ಲ. ಕನಕರ ಭಾಷೆಯ ಸ್ವರೂಪದ ಅಧ್ಯಯನ ನಡೆಯಲಿ ಎಂದರು.
ಸಮಾರಂಭದಲ್ಲಿ ಕಾಲೇಜಿನ ಟ್ರಸ್ಟಿ ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.ಉಪನ್ಯಾಸಕ ವರ್ಷಿತ್ ಕೆ ಸ್ವಾಗತಿಸಿದರು. ಅಶ್ವಿನಿ ಕೆ.ಬಿ ವಂದಿಸಿದರು. ಅನುಪಮ ಪಿ ಮತ್ತು ಆಶಾಲತಾ ಪಿ ನಿರೂಪಿಸಿದರು.