ಕೊಟ್ಟೂರು: ಅರಮನೆಯಲ್ಲಿದ್ದ ಸಿರಿತನ ಸಂಪತ್ತು ತ್ಯಜಿಸಿದ ಕನಕದಾಸರು ಜನರ ಹೃದಯ ಭಾಷೆಯಾದ ಕನ್ನಡದಿಂದ ಸಾಹಿತ್ಯ ರಚಿಸಿ ಜನರ ಹೃದಯವನ್ನು ತಲುಪಿ ದಾಸ ಶ್ರೇಷ್ಠ ಎನಿಸಿದ್ದಾರೆ ಎಂದು ನಿವೃತ್ತ ಉಪನ್ಯಾಸಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಹೇಳಿದರು.
ಕನಕದಾಸರ ಕೀರ್ತನೆಗಳನ್ನು ನಾವೆಲ್ಲಾ ಅರ್ಥೈಸಿಕೊಂಡು ಒಂದೇ ಎನ್ನುವ ಭಾವವನ್ನು ಮೂಡಿಸಿಕೊಳ್ಳಬೇಕು. ವೈಚಾರಿಕೆ ಪ್ರಜ್ಞೆಯ ಜೊತೆಗೆ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಮೂಢ ನಂಬಿಕೆ, ಜಾತೀಯತೆ, ಊಳಿಗಮಾನ್ಯ ಪದ್ಧತಿಯಿಂದ ದುಸ್ತರವಾಗಿದ್ದ ಕಾಲಘಟ್ಟದಲ್ಲಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ್ದರು. ಸಮಾಜದಲ್ಲಿ ಪ್ರಶ್ನೆ ಮಾಡುವ ಧೈರ್ಯವನ್ನು ಜನರಲ್ಲಿ ಮೂಡಿಸಿದದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಜಿ.ಕೆ. ಅಮರೇಶ ಮಾತನಾಡಿ, ಸಾಮಾಜಿಕ, ಸಾಹಿತ್ಯಿಕ, ಧಾರ್ಮಿಕ ಬದಲಾವಣೆಗೆ ಕನಕದಾಸರು ತಮ್ಮದೇ ಶೈಲಿಯಲ್ಲಿ ಶ್ರಮಿಸಿದ್ದರು. ಆ ಮೂಲಕ ಸಮಾಜದ ಎಲ್ಲರನ್ನೂ ಬಾಗಿಸಿದ್ದರು. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಅಂಕು-ಡೊಂಕು, ಜಾತಿ, ಕೆಟ್ಟ ಆಚರಣೆಗಳನ್ನು ತೊಡೆದುಹಾಕಲು ಜಾಗೃತಿ ಮೂಡಿಸಿದ್ದರು ಎಂದು ಹೇಳಿದರು.ಪಪಂ ಅಧ್ಯಕ್ಷ ಬದ್ದಿ ರೇಖಾರಮೇಶ, ಉಪಾಧ್ಯಕ್ಷ ಜಿ.ಸಿದ್ದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಿನಮ್ಮ ವಿರುಪಾಕ್ಷಿ, ಮುಖ್ಯಾಧಿಕಾರಿ ಎ.ನಸರುಲ್ಲಾ, ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮೂಗಣ್ಣ ಮಾತನಾಡಿದರು.ಪಪಂ ಸದಸ್ಯರಾದ ಕೆಂಗರಾಜ, ತೋಟದ ರಾಮಣ್ಣ, ವೀಣಾ ವಿವೇಕಾನಂದ, ಲಕ್ಷ್ಮೀ ಚನ್ನಪ್ಪ, ರಾಂಪುರ ಭರಮಜ್ಜ ಇತರರು ಇದ್ದರು. ಸಮಾಜದಲ್ಲಿ ಸೇವೆ ಸಲ್ಲಿಸಿದ ಮುಖಂಡರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿ.ಮ. ಗುರುಬಸವರಾಜ ನಿರ್ವಹಿಸಿದರು.