ಶ್ರೀರಂಗಪಟ್ಟಣ:
ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳವಳಿಗೆ ಕನಕದಾಸರು ನೀಡಿದ ಕೊಡುಗೆ ಅಮೂಲ್ಯವಾದದ್ದು ಎಂದು ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕನಕದಾಸರು ಕರ್ನಾಟಕದ ಒಬ್ಬ ಪ್ರಮುಖ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂತರಾಗಿದ್ದರು ಎಂದರು.
ಲೌಕಿಕ ಜೀವನವನ್ನು ತ್ಯಜಿಸಿ ಶ್ರೀಕೃಷ್ಣನ ಆರಾಧನೆಗೆ ತಮ್ಮನ್ನು ಅರ್ಪಿಸಿಕೊಂಡರು. ಕನಕದಾಸರು ಒಬ್ಬ ಪ್ರಮುಖ ಸಾಹಿತ್ಯ ಮತ್ತು ಸಾಂಸ್ಕೃತಿಕ ವ್ಯಕ್ತಿಯಾಗಿದ್ದು, ಅವರು ತಮ್ಮ ಸಾಹಿತ್ಯ ಕೃತಿಗಳನ್ನು ಸಾಮಾಜಿಕ ಜಾಗೃತಿಯನ್ನು ಹರಡಲು ಬಳಸಿಕೊಂಡರು. ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ್ದರು ಎಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೇತನಾ ಯಾದವ್, ತಾಪಂ ಇಒ ವೇಣು ಸೇರಿದಂತೆ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಇದ್ದರು.
ಸಮಾನತೆ ಸಂದೇಶ ಸಾರಿದ ಸಂತ ಕನಕದಾಸ: ಎಸ್.ಎನ್.ಜಯರಾಂಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸರಳವಾಗಿ ಕೀರ್ತನೆ ಮೂಲಕ ಇರುವುದೊಂದೇ ಕುಲ, ಅದು ಮಾನವಕುಲ ಎಂದು ಸಾರಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಕನಕದಾಸರು ಎಂದು ಕಿಕ್ಕೇರಿ ಇನ್ಸ್ಪೆಕ್ಟರ್ ಎಸ್.ಎನ್. ಜಯರಾಂ ಹೇಳಿದರು.ಪಟ್ಟಣದ ಆರಕ್ಷಕ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಾಸ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತಕ್ಕೆಕನಕರ ಕೊಡುಗೆ ಅನನ್ಯ. ತಿರುಪತಿ ತಿಮ್ಮಪ್ಪನ ಹರಕೆಯಿಂದ ಜನಿಸಿದ ಕನಕದಾಸರು ವಿಜಯನಗರದ ಮಾಂಡಳಿಕರಾಗಿದ್ದರು. ಹೆಂಡತಿ, ತಾಯಿ, ಮಗನ ಅಕಾಲಿಕ ಮರಣದಿಂದ ವೈರಾಗ್ಯ ತಾಳಿ ಭಗವಂತನ ಸಾಕ್ಷಾತ್ಕಾರಕ್ಕಾಗಿ ಲೋಕ ಪರ್ಯಟನೆ ಮಾಡಿದರು. ಬದುಕಿನಲ್ಲಿ ಕಂಡ ಸಂಗತಿಯನ್ನು ಕೀರ್ತನೆ ಮೂಲಕ ತಿಳಿಸಿ ಲೋಕದ ಡೊಂಕು ತಿದ್ದಲು ಮುಂದಾಗಿ ದಾಸಶ್ರೇಷ್ಟರಾದರು ಎಂದರು.
ನಾನು ಎಂಬ ಅಹಂ, ನಶ್ವರ ಬದುಕು ಬಿಡಿ. ಜಾತಿಗಳಿಂದ ಮತಿ ಹೀನರಾಗದೆ ಕಾಗಿನೆಲೆ ಕೇಶವನಲ್ಲಿ ಆದಿಕೇಶವನ ಕಾಣಬೇಕು. ಪ್ರತಿಯೊಬ್ಬರೂ ಸಮಸಮಾಜದ ಬದುಕು ಸಾಗಿಸುವಂತೆ ತಿಳಿಸಿದವರು ಕನಕದಾಸರು.ಕನಕದಾಸರ ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಸಿಬ್ಬಂದಿಗಳಾದ ಪ್ರಶಾಂತ್, ಅಶೋಕ್, ಅವಿನಾಶ್, ಮಂಜು, ಪ್ರದೀಪ್, ಶಿಲ್ಪಶ್ರೀ ಇದ್ದರು.