ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಉಡುಪಿಕನಕದಾಸರು ತಮ್ಮ ಸಾಹಿತ್ಯ ಹಾಗೂ ಸಂಗೀತದ ಮೂಲಕ ಜನರನ್ನು ಅಸಮಾನತೆಯ ಬಗ್ಗೆ ಜಾಗೃತಗೊಳಿಸಿ, ಸುಂದರ ಸಮಾಜ ನಿಮಾರ್ಣಕ್ಕೆ ಕೊಡುಗೆ ನೀಡಿದ್ದಾರೆ. ಕನಕನ ಸಂದೇಶ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಿ ಸಮಾನ ಸಮಾಜವನ್ನು ಕಟ್ಟಬಲ್ಲ ಶಕ್ತಿ ಹೊಂದಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ನಗರದ ಅಜ್ಜರಕಾಡು ಭುಜಂಗ ಪಾರ್ಕ್ನಲ್ಲಿ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ ಹಾಗೂ ಉಡುಪಿ ಜಿಲ್ಲ ಹಾಲುಮತ ಮಹಾಸಭಾಗಳ ಆಶ್ರಯದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಉಡುಪಿ ಹಾಗೂ ಕನಕನಿಗೂ ಬಹು ದೊಡ್ಡ ಭಾವನಾತ್ಮಕ ಸಂಬಂಧವಿದ್ದು, ದೇವರು ಮತ್ತು ಭಕ್ತನ ನಡುವೆ ಅಸಮಾನತೆಗೆ ಸ್ಥಾನವಿಲ್ಲ, ಭಕ್ತಿಯೇ ಪ್ರಧಾನವಾಗಿರುತ್ತದೆ ಎಂಬುದನ್ನು ಶ್ರೀಕೃಷ್ಣನು ಕನಕನ ಮೂಲಕ ಜಗತ್ತಿಗೇ ಸಾರಿದ್ದು ಇಲ್ಲಿ ವಿಶೇಷತೆಯಾಗಿದೆ ಎಂದರು.ಶಾಸಕ ಯಶ್ಪಾಲ್ ಎ. ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೇಶ ಕಂಡ ಶ್ರೇಷ್ಠ ಸಂತರಲ್ಲಿ ಕನಕದಾಸರು ಒಬ್ಬರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕೀರ್ತನೆಗಳ ಮೂಲಕ ದೇವರನ್ನು ಕಾಣಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅವರು ಶ್ರೀಕೃಷ್ಣ ಮಠಕ್ಕೆ ಬಂದು ಕೃಷ್ಣನ ದರ್ಶನ ಪಡೆದ ಕನಕನ ಕಿಂಡಿ ಇಂದಿಗೂ ವಿಶ್ವಪ್ರಸಿದ್ದಿ ಹೊಂದಿದೆ ಎಂದು ಹೇಳಿದರು.ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸ ನೀಡಿ, ಮಾತಿನಿಂದ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಸಂಗೀತ ಮಾಡುತ್ತದೆ. ಕನಕದಾಸರು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಕನಕದಾಸರ ಕೀರ್ತನೆ ಹಾಗೂ ಮೌಲ್ಯಗಳು ಬದುಕಿಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರು ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ಡಾ. ಅರುಣ್ ಕೆ., ಎಡಿಸಿ ಮಮತಾ ದೇವಿ ಜಿ.ಎಸ್., ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್ ವೈ. ಕುರುಬರ, ಹಾಲುಮತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಎಚ್. ಐಹೊಳೆ, ಸಮಾಜದ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿ, ವಂದಿಸಿದರು.