ಶಿರಹಟ್ಟಿ: ಕನಕದಾಸರ ಸಾಹಿತ್ಯ, ಕೀರ್ತನೆಗಳಲ್ಲಿರುವಷ್ಟು ಸಾಮಾಜಿಕ ಸಮಾನತೆ, ಪರಿವರ್ತನೆಯ ಚಿಂತನೆ ಬೇರೆ ಯಾವ ಸಾಹಿತ್ಯದಲ್ಲೂ ಇಲ್ಲ. ಅವರು ಕೇವಲ ದಾಸಶ್ರೇಷ್ಠರು ಮಾತ್ರವಲ್ಲ, ಧಾರ್ಮಿಕ, ವೈಚಾರಿಕ, ಸಾಹಿತ್ಯಿಕ, ಸಾಮಾಜಿಕ ಹೀಗೆ ಹತ್ತು ಹಲವು ವಿಭಾಗಗಳಲ್ಲೂ ಶ್ರೇಷ್ಠರಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ತಾಲೂಕು ಆಡಳಿತ, ತಾಪಂ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಶಿರಹಟ್ಟಿ ಘಟಕದ ವತಿಯಿಂದ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಸಂದೇಶಗಳು ಎಲ್ಲ ಪ್ರಕಾರಗಳಲ್ಲಿ ವ್ಯಕ್ತವಾಗಿವೆ. ಈ ಚಿಂತನೆಗಳನ್ನು ಯುವ ಪೀಳಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದರು.ಭಾರತೀಯ ಸಾಂಸ್ಕೃತಿಕ ಪರಂಪರೆಯ ದಾಸಶ್ರೇಷ್ಠ ಕನಕದಾಸರ ಸಾಮಾಜಿಕ ಆದರ್ಶ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅಸಮಾನತೆ ತುಂಬಿದ್ದ ಸಮಾಜದಲ್ಲಿ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಜನರನ್ನು ಎಚ್ಚರಿಸಿದ ಕನಕದಾಸರು, ತಮ್ಮ ಜಾಗ್ರತ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಭಕ್ತಿ ಮಾರ್ಗದತ್ತ ಜನರನ್ನು ಕೊಂಡೊಯ್ದ ಕನಕದಾಸರ ಮೌಲ್ಯಯುತ ಕೀರ್ತನೆಗಳ ಸಾರವನ್ನು ಎಲ್ಲರೂ ಅರಿಯಬೇಕಿದೆ ಎಂದರು.
ನಿವೃತ್ತ ಶಿಕ್ಷಕ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ಸಾಮಾಜಿಕವಾಗಿ ಶೋಷಣೆಗೊಳಗಾದ ಜನಾಂಗದಲ್ಲಿ ಹುಟ್ಟಿದ ಕನಕದಾಸರು, ಅಂದಿನ ವರ್ಣ ಪದ್ಧತಿ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿ, ಸರ್ವ ಜನಾಂಗದ ಏಕತೆಗಾಗಿ ಶ್ರಮಿಸಿದ್ದಾರೆ ಎಂದರು.ಸಮಾಜದ ತಾಲೂಕು ಘಟಕದ ಅಧ್ಯಕ್ಷ ಹೊನ್ನೇಶ ಪೋಟಿ, ಮಂಜುನಾಥ ಘಂಟಿ, ರಾಮಣ್ಣ ಕಂಬಳಿ, ಸಂತೋಷ ಕುರಿ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಬಸವರಾಜ ವಡವಿ, ಫಕ್ಕಿರೇಶ ಕರಿಗಾರ, ದೇವಪ್ಪ ಬಟ್ಟೂರ, ಹೇಮಂತ ಕೆಂಗೊಂಡ, ಆನಂದ ಮಾಳೆಕೊಪ್ಪ, ಹನುಮಂತ ಗೊಜನೂರ, ಹೊನ್ನಪ್ಪ ಶಿರಹಟ್ಟಿ, ವಸಂತ ಜಗ್ಗಲರ, ತಹಸೀಲ್ದಾರ್ ಕೆ. ರಾಘವೇಂದ್ರ ರಾವು, ಎಚ್. ನಾಣಕೀ ನಾಯಕ, ಶಿವಪ್ಪ ಹದ್ಲಿ, ಸುನೀಲ ಲಮಾಣಿ, ಶಶಿ ಪೂಜಾರ, ಸಂತೋಷ ಅಸ್ಕಿ, ಗಿರಿಜಾ ಪೂಜಾರ ಇದ್ದರು.