ಸಂಗೀತ ಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ ಕನಕಾಪುರ, ಬೆಂಡಿಗೇರಿ

KannadaprabhaNewsNetwork | Published : Nov 15, 2024 12:38 AM

ಸಾರಾಂಶ

ಪಂ. ಬೆಂಡಿಗೇರಿ ಅವರು ನಾಡಿನ ಬಹುದೊಡ್ಡ ತಬಲಾ ಕಲಾವಿದರು. ಧಾರವಾಡ ಆಕಾಶವಾಣಿಯ ಮೊಟ್ಟ ಮೊದಲ ‘ಎ’ ಗ್ರೇಡ್ ಕಲಾವಿದರಾಗಿದ್ದರು. ಅವರಷ್ಟೇ ದೊಡ್ಡ ಎತ್ತರಕ್ಕೆ ಏರಿದವರು ಪಂ. ಕನಕಾಪುರ. ಪ್ರಪಂಚದಲ್ಲಿಯೇ ಅತ್ಯಂತ ತ್ವರಿತವಾಗಿ ಹಾರ್ಮೊನಿಯಂ ಕಲಾವಿದರಾಗಿದ್ದರು.

ಧಾರವಾಡ:

ಪಂ. ವಸಂತ ಕನಕಾಪುರ ಹಾಗೂ ಪಂ. ಬಸವರಾಜ ಬೆಂಡಿಗೇರಿ ಸಂಗೀತ ಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ ಮಹನೀಯರು ಎಂದು ನಟ, ನಿರ್ದೇಶಕ ಡಾ. ಶಶಿಧರ ನರೇಂದ್ರ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಆಶ್ರಯದಲ್ಲಿ ಇಬ್ಬರು ಮಹನೀಯರ ಸ್ಮರಣೆ ಹಾಗೂ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.

ಪಂ. ಬೆಂಡಿಗೇರಿ ಅವರು ನಾಡಿನ ಬಹುದೊಡ್ಡ ತಬಲಾ ಕಲಾವಿದರು. ಧಾರವಾಡ ಆಕಾಶವಾಣಿಯ ಮೊಟ್ಟ ಮೊದಲ ‘ಎ’ ಗ್ರೇಡ್ ಕಲಾವಿದರಾಗಿದ್ದರು. ಅವರಷ್ಟೇ ದೊಡ್ಡ ಎತ್ತರಕ್ಕೆ ಏರಿದವರು ಪಂ. ಕನಕಾಪುರ. ಪ್ರಪಂಚದಲ್ಲಿಯೇ ಅತ್ಯಂತ ತ್ವರಿತವಾಗಿ ಹಾರ್ಮೊನಿಯಂ ಕಲಾವಿದರಾಗಿದ್ದರು ಎಂದರು.

ಡಾ. ದ.ರಾ. ಬೇಂದ್ರೆ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ಮೈಸೂರಿನ ಧ್ವನಿ ಫೌಂಡೇಶನ್‌ ಅಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ಭಾಗವಹಿಸಿದ್ದರು. ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ರೋಹಿಣಿ ಇಮಾರತಿ, ವಿದುಷಿ ಪ್ರಮೋದಾ ಉಪಾಧ್ಯೆ, ವಿದುಷಿ ಡಾ. ಸೀಮಾ ಉಪಾಧ್ಯಾಯ ಹಾಗೂ ವಿದುಷಿ ಸವಿತಾ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ಪಂ. ವಸಂತ ಕನಕಾಪುರ ಜೀವನಾಧಾರಿತ ನೃತ್ಯ ರೂಪಕವನ್ನು ಡಾ. ಸೀಮಾ ಉಪಾಧ್ಯಾಯ ಅವರ ಅಭಿನಯ ಸ್ಕೂಲ್ ಆಫ್ ಡಾನ್ಸನ್‌ ಕಲಾವಿದರ ಪ್ರದರ್ಶನವು ಅತ್ಯಂತ ಆಕರ್ಷಕವಾಗಿತ್ತು. ನೃತ್ಯೋತ್ಸವದಲ್ಲಿ ಗಣೇಶ ನೃತ್ಯ ಶಾಲೆ, ಉಪಾಧ್ಯೆ ನೃತ್ಯ ವಿಹಾರ, ಭರತ ನೃತ್ಯ ಅಕಾಡೆಮಿ, ಧಾರವಾಡ ಅಭಿನಯ ಸ್ಕೂಲ್ ಆಫ್ ಡಾನ್ಸ್ ಹಾಗೂ ಕಲಾರ್ಪಣ ಟ್ರಸ್ಟ್‌ ಕಲಾವಿದರು ನೃತ್ಯ ಪ್ರದರ್ಶಿಸಿದರು.

ರವಿ ಕುಲಕರ್ಣಿ ನಿರೂಪಿಸಿದರು. ಸಂಯೋಜಕ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಡಾ. ಎ.ಎಲ್. ದೇಸಾಯಿ ವಂದಿಸಿದರು.

Share this article