ಕನ್ನಡಪ್ರಭ ವಾರ್ತೆ, ಆನೇಕಲ್ಕನ್ನಡ ಜಾಗೃತಿ ವೇದಿಕೆಯ ವತಿಯಿಂದ ಕನ್ನಡಿಗರ ಐಕ್ಯತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಪುರುಷರು ಜಾಥಾದಲ್ಲಿ ಪಾಲ್ಗೊಂಡು ಕನ್ನಡ ಕಹಳೆ ಮುಗಿಲು ಮುಟ್ಟುವಂತೆ ಮೊಳಗಿಸಿದರು.
ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ. ಅತ್ತಿಬೆಲೆ ಗಡಿ ಗೋಪುರದಲ್ಲಿ ಗಂಡ ಬೇರುಂಡ ಚಿಹ್ನೆ ಇದ್ದು ನಮ್ಮ ಅಸ್ಮಿತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಗೋಪುರ ಇರಬಾರದು ಎಂದು ಕೆಲ ಇಲಾಖೆಗಳು ತಿಳಿಸುತ್ತಿದ್ದು ಗಡಿಗೋಪುರದ ವಿಷಯಕ್ಕೆ ಬಂದರೆ ಕನ್ನಡಿಗರು ದಂಗೆ ಏಳಬೇಕಾಗುತ್ತದೆ. 1993ರಲ್ಲಿ ಕನ್ನಡ ಗಡಿ ಗೋಪುರದ ಮೇಲೆ ಕನ್ನಡ ಜಾಗೃತಿ ವೇದಿಕೆಯು ಕನ್ನಡ ಬಾವುಟವನ್ನು ಹಾರಿಸಿದ್ದು 32 ವರ್ಷಗಳಿಂದ ನಿರಂತರವಾಗಿ ಕನ್ನಡ ಧ್ವಜ ಹಾರಾಡುತ್ತಿದೆ ಎಂದರು.ಆನೇಕಲ್ ವಕೀಲರ ಸಂಘದ ಅಧ್ಯಕ್ಷ ಪಟಾಪಟ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ದೇವೇಗೌಡ, ಪಟಾಪಟ್ ರವಿ, ನಾಗರಾಜು ಸೋನಿ, ಪಟಾಪಟ್ ಶ್ರೀನಿವಾಸ್, ಮುರಳಿ, ರವಿ, ಯುವ ಅಧ್ಯಕ್ಷ ಎಸ್.ಕೆ. ಗೌರೀಶ್, ಮಹಿಳಾ ಅಧ್ಯಕ್ಷೆ ವತ್ಸಲ, ಕವಿತಾ ಪೇಟೇಮಠ್, ಲಕ್ಷ್ಮೀ ಹುದಲಿ ಸೇರಿದಂತೆ ನೂರಾರು ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನ ಅತ್ತಿಬೆಲೆ ವೃತ್ತದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಅತ್ತಿಬೆಲೆ ಗಡಿಯವರೆಗೂ ಸಾಗಿತು. ತಮಟೆ ಸದ್ದಿಗೆ ಕನ್ನಡ ಪರ ಕಾರ್ಯಕರ್ತರು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.