;Resize=(412,232))
ವಿಧಾನ ಪರಿಷತ್ : ರಾಜ್ಯದಲ್ಲಿನ ಡ್ರಗ್ಸ್ ಹಾವಳಿ ಕುರಿತು ‘ಕನ್ನಡಪ್ರಭ’ ದಿನಪತ್ರಿಕೆ ಭಾನುವಾರ ‘ಕರುನಾಡು ಡ್ರಗ್ಸ್ ಬೀಡು’ ಅಭಿಯಾನದಡಿ ಪ್ರಕಟಿಸಿದ ‘ದಶ ದಿಕ್ಕುಗಳಿಂದ ಕರ್ನಾಟಕಕ್ಕೆ ಗಂಡಾಂತರ’ ವಿಶೇಷ ವರದಿ ಸುವರ್ಣ ವಿಧಾನಪರಿಷತ್ತಿನ ಕಲಾಪದಲ್ಲಿ ಸೋಮವಾರ ಪ್ರಸ್ತಾಪವಾಯಿತು.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಈ ವಿಶೇಷ ವರದಿ ಪ್ರಸ್ತಾಪಿಸಿದರು. ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾಕ್ಕೆ ಈಗ ಕರ್ನಾಟಕ ಬೃಹತ್ ಮಾರುಕಟ್ಟೆಯಾಗಿದೆ. ಜಗತ್ತಿನ ಹತ್ತಕ್ಕೂ ಹೆಚ್ಚಿನ ದೇಶಗಳಿಂದ ರಾಜ್ಯಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ಈ ಡ್ರಗ್ಸ್ ಯುವ ಸಮುದಾಯವನ್ನು ಆವರಿಸಿಕೊಳ್ಳುತ್ತಿದೆ ಎಂದು ಪತ್ರಿಕೆಯ ಇಡೀ ವರದಿಯನ್ನು ಕಲಾಪದಲ್ಲಿ ಓದಿ ಸರ್ಕಾರದ ಗಮನ ಸೆಳೆದರು.
ಈ ಡ್ರಗ್ಸ್ ದಂಧೆಗೆ ಕಡಿವಾಣ ಹಾಕದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರ ಈ ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭಾನಾಯಕ ಬೋಸರಾಜು, ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು.
ಕರ್ನಾಟಕ ಡ್ರಗ್ಸ್ ದಂಧೆಯ ಕೇಂದ್ರಸ್ಥಾನವಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು ಹಾಳಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಡ್ರಗ್ಸ್ ದಂಧೆಯಲ್ಲಿ ದಾಪುಗಾಲು ಇಡುತ್ತಿದೆ. ಶಾಲಾ-ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ರೇವ್ ಪಾರ್ಟಿ ಆಗುತ್ತಿವೆ. ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಸಂಬಂಧಗಳು ಹಾಳಾಗುತ್ತಿವೆ. ಕೆಟ್ಟ ಸಂಸ್ಕೃತಿಯತ್ತ ಯುವಜನರು ಆಕರ್ಷಿತರಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಇಂಥ ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದೆಸೆಯಿಂದಲೇ ಭಗವದ್ಗೀತೆ ಬೋಧನೆಗೆ ಸಲಹೆ ನೀಡಿದ್ದೇನೆ ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ, ಪ್ರೊಬೆಷನರಿ ಅವಧಿಯಲ್ಲೇ ಪೊಲೀಸರು ದರೋಡೆ ಕೃತ್ಯಗಳಲ್ಲಿ ಶಾಮೀಲಾಗುತ್ತಿರುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇವೆಲ್ಲಾ ಯಾಕಾಗುತ್ತಿದೆ ಎಂಬುದನ್ನು ಆಲೋಚನೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.