ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಎಂ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಕಲಾವೈಭವ 2025ರಲ್ಲಿ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ಅನಾವರಣಗೊಂಡು ಕರುನಾಡಿನ ಡಿಂಡಿಮದ ಸದ್ದು ಕೇಳಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಎಂ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕನ್ನಡ ಕಲಾವೈಭವ 2025ರಲ್ಲಿ ಕನ್ನಡ ನಾಡು-ನುಡಿ, ಕಲೆ, ಸಂಸ್ಕೃತಿ, ಸಂಪ್ರದಾಯಗಳ ಅನಾವರಣಗೊಂಡು ಕರುನಾಡಿನ ಡಿಂಡಿಮದ ಸದ್ದು ಕೇಳಿತು.
ಜನಪದ ಕಲಾ ಪ್ರಕಾರಗಳ ಮತ್ತು ಆರಾಧನಾ ಕಲೆಗಳ ಉಡುಗೆಗಳ ಜೊತೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಸ್ಕೃತಿ, ಸಂಪ್ರದಾಯಗಳ ಪ್ರತಿಬಿಂಬಿಸುವ ಉಡುಗೆ-ತೊಡುಗೆ ತೊಟ್ಟು ಮಿಂಚುತ್ತಾ ನೃತ್ಯ, ನಟನೆ, ಪ್ರದರ್ಶನಗಳ ಮೂಲಕ ಕರುನಾಡಿನ ಹಿರಿಮೆ-ಗರಿಮೆಯನ್ನು ಎತ್ತಿಹಿಡಿದರು.
ಮೆರವಣಿಗೆಗೆ ಚಾಲನೆ:
ಜಿಎಂಯು ಆವರಣದಲ್ಲಿ ಗಣಪತಿಯ ಪೂಜೆಯೊಂದಿಗೆ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಸ್ತಬ್ದಚಿತ್ರಗಳ ಭವ್ಯಮೆರವಣಿಗೆಗೆ ಜಿಎಂವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್.ಶಂಕಪಾಲ್ ಚಾಲನೆ ನೀಡಿದರು.
ಉಪಕುಲಪತಿ ಡಾ.ಹೆಚ್.ಡಿ.ಮಹೇಶಪ್ಪ, ಕುಲಸಚಿವ ಡಾ.ಬಿ.ಎಸ್. ಸುನೀಲ್ ಕುಮಾರ್ ಇತರರು ಇದ್ದರು. ತೀರ್ಪುಗಾರರಾಗಿ ಡಾ. ಮಹಾಂತೇಶ ಪಾಟೀಲ, ಡಾ.ಮಂಜುನಾಥ ಶ್ಯಾಗಲೆ, ಜ್ಞಾನೇಶ್ವರ ಜವಳಿ ಆಗಮಿಸಿದ್ದರು.
ದಕ್ಷಿಣ ಭಾರತೀಯ ಪರಂಪರೆ, ಕರ್ನಾಟಕದ ಹಬ್ಬಗಳು, ಸಂಸ್ಕೃತಿ, ಕನ್ನಡ ಸಾಹಿತ್ಯ, ವೈವಿಧ್ಯತೆಯಲ್ಲಿ ಏಕತೆ, ಉತ್ತರ ಭಾರತೀಯ ಸಂಪ್ರದಾಯಗಳು, ನೃತ್ಯಗಳು, ಸಂಗೀತ ಪ್ರಕಾರಗಳು, ಹಬ್ಬಗಳು, ಸ್ಯಾಂಡಲ್ ವುಡ್ ರೆಟ್ರೋ ಮತ್ತು ರೀಜನಲ್, ಭಾರತೀಯ ಹಬ್ಬಗಳು, ಜನಪದ ಸಂಸ್ಕೃತಿ, ಭಾರತೀಯ ಜವಳಿ ಪರಂಪರೆ, ಗೋಲಿ, ಬುಗರಿಯಾಟ ಸೇರಿದಂತೆ ಗ್ರಾಮೀಣ ಬದುಕಿನ ಕ್ರೀಡೆಗಳ ಸೊಬಗು ಹೀಗೆ ಈ ಶೀರ್ಷಿಕೆಗಳನ್ನೊಳಗೊಂಡ 16 ಸ್ತಬ್ದಚಿತ್ರಗಳುವೀಕ್ಷಕರ ಕಣ್ಮನ ಸೆಳೆದವು.
ಕನ್ನಡ ಕಲಾ ವೈಭವದ ಅಂಗವಾಗಿ ವೇಷಭೂಷಣ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಎಚ್.ಎಸ್.ಕಿರಣ್ ಕುಮಾರ, ಡಾ.ಎಂ. ಸಂತೋಷ್ ಕುಮಾರ, ಪ್ರೊ. ಬಿ.ಎಸ್.ದೀಪಾ,
ಜಿಎಂ ವಿಶ್ವವಿದ್ಯಾನಿಲಯದ ಸಮೂಹ ಶಿಕ್ಷಣಸಂಸ್ಥೆಗಳ ಪ್ರಾಂಶುಪಾಲರು, ಡೀನ್ ಗಳು, ನಿರ್ದೇಶಕರು, ಮುಖ್ಯಸ್ಥರು, ಅಧ್ಯಾಪಕ, ಅಧ್ಯಾಪಕೇತರ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.