- ಎ.ಎಲ್.ಎನ್. ರಾವ್ ಕಾಲೇಜಿನಲ್ಲಿ ಶಿಷ್ಯೋಪನಯನ, ಕನ್ನಡ ರಾಜ್ಯೋತ್ಸವ
ಸಂಸ್ಕಾರ ಮತ್ತು ಸಂಸ್ಕೃತಿಗಳ ಪ್ರತೀಕವಾದ ನಮ್ಮ ಮಾತೃಭಾಷೆ ಕನ್ನಡದ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಯುರ್ವೇದ ಕಾಲೇಜು ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಚಿಕ್ಕಮಗಳೂರು ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೂರು ಲಕ್ಷ್ಮಿ ನಾರಾಯಣ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿದ್ದ ಅವರು ಇಡೀ ವಿಶ್ವಕ್ಕೆ ಸಂಸ್ಕಾರ ಕಲಿಸುವ ಭಾಷೆ ಇದ್ದರೆ ಅದು ನಮ್ಮ ಕನ್ನಡ ಮಾತ್ರ. ಕನ್ನಡ ನಾಡಿನ ಸಾಹಿತಿಗಳು, ಕವಿಗಳು ಮತ್ತು ಇಲ್ಲಿ ಹುಟ್ಟಿ ಬೆಳೆದವರು ದೇಶ ವಿದೇಶಗಳಲ್ಲಿ ಕನ್ನಡದ ಕಂಪು ಹರಡಿದ್ದಾರೆ. ಸಾಧನೆ ಮಾಡುವವರಲ್ಲಿ ಕನ್ನಡದ ಜನರು ಬಹು ಎತ್ತರದಲ್ಲಿ ನಿಲ್ಲುತ್ತಾರೆ ಎಂದರು.ಅತಿಥಿ ಎನ್.ಆರ್.ಪುರ ಕಸಾಪ ತಾಲೂಕು ಅಧ್ಯಕ್ಷ ಪೂರ್ಣೇಶ್ ಮಾತನಾಡಿ ಕನ್ನಡ ಭಾಷೆ ಜನರು ತೋರುವ ಪ್ರೀತಿ, ಸ್ನೇಹ ವಿಶ್ವಕ್ಕೆ ಮಾದರಿ ಎಂದರು.ಕಾಲೇಜು ಟ್ರಸ್ಟಿ ನಮಿತಾ ರಾವ್ ಮಾತನಾಡಿ ಕನ್ನಡ ರಾಜ್ಯೋತ್ಸವ ಪ್ರತಿ ವರ್ಷ ಆಚರಿಸುವ ಮೂಲಕ ಕನ್ನಡ ಭಾಷೆ ಬೆಳೆ ಸೋಣ ಎಂದರು. ಕಾಲೇಜಿನ ದ್ವೈಮಾಸಿಕ ಪತ್ರಿಕೆ ನವೆಂಬರ್ ವಿಶೇಷ ಕನ್ನಡದಲ್ಲಿ ಮುದ್ರಣವಾದ "ವ್ಯಾಸ ತರಂಗ " ಸಂಚಿಕೆ 3ನೇ ಆವೃತ್ತಿ ಅನಾವರಣಗೊಳಿಸಲಾಯಿತು. ನಂತರ ಕನ್ನಡದ ಕಂಪು ಪಸರಿಸುವ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿವಿಧ ಕಾರ್ಯಕ್ರಮವನ್ನು ವೈದ್ಯಕೀಯ ವಿದ್ಯಾರ್ಥಿಗಳು ಪ್ರಚುರಪಡಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ಹರ್ಷ, ಉಪ-ಪ್ರಾಂಶುಪಾಲ ಡಾ. ಪ್ರಶಾಂತ್ ಭಟ್, ಡಾ. ಡಿ.ಕೆ.ಮಿಶ್ರ , ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.