ಕನ್ನಡ ಪ್ರೀತಿ, ಮಮತೆಯ ಭಾಷೆ: ಸುದೀರ್‌ ಕುಮಾರ್‌ ಮುರೊಳ್ಳಿ

KannadaprabhaNewsNetwork | Published : Nov 28, 2024 12:32 AM

ಸಾರಾಂಶ

ನರಸಿಂಹರಾಜಪುರ, ಕನ್ನಡ ಭಾಷೆ ಅನ್ನದ ಭಾಷೆಯಾಗಿದೆ. ಪ್ರೀತಿ, ಮಮತೆಯ ಭಾಷೆಯಾಗಿದೆ ಎಂದು ಕೊಪ್ಪದ ವಕೀಲರು ಹಾಗೂ ವಾಗ್ಮಿ ಸುಧೀರ್‌ ಕುಮಾರ್‌ ಮುರೊಳ್ಳಿ ತಿಳಿಸಿದರು.

ಕೆರೆಗದ್ದೆಯಲ್ಲಿ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕನ್ನಡ ಭಾಷೆ ಅನ್ನದ ಭಾಷೆಯಾಗಿದೆ. ಪ್ರೀತಿ, ಮಮತೆಯ ಭಾಷೆಯಾಗಿದೆ ಎಂದು ಕೊಪ್ಪದ ವಕೀಲರು ಹಾಗೂ ವಾಗ್ಮಿ ಸುಧೀರ್‌ ಕುಮಾರ್‌ ಮುರೊಳ್ಳಿ ತಿಳಿಸಿದರು.

ಮಂಗಳವಾರ ಸಂಜೆ ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ವನ ದುರ್ಗಾ ಪರಮೇಶ್ವರಿ ಸಭಾ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತರೂ ಮಕ್ಕಳು ಕನ್ನಡ ಭಾಷೆ ಆರಾಧಿಸಬೇಕು. ಕನ್ನಡದಲ್ಲೇ ಮಾತನಾಡ ಬೇಕು. 1947 ರ ನ. 26 ಸಂವಿಧಾನ ಸ್ವೀಕಾರ ಮಾಡಿದ ದಿನವಾಗಿದೆ. ಇಂದು ಕನ್ನಡ ರಾಜ್ಯೋತ್ಸ ಆಚರಿಸುತ್ತಿದ್ದೇವೆ. ಕುವೆಂಪು ಅ‍ವರು ಮೈಸೂರು ರಾಜ್ಯದ ಭಾಷಾವಾರು ವಿಂಗಡನೆಗಿಂತ ಮುಂಚೆಯೇ ನಾಡಗೀತೆ ರಚನೆ ಮಾಡಿದ್ದರು. ಸರ್ವಜನಾಂಗದ ತೋಟ ಎಂದು ನಾಡಗೀತೆಯಲ್ಲಿ ವರ್ಣನೆ ಮಾಡಿದ್ದರು. 14 ನೇ ಶತಮಾನದಲ್ಲೇ ಬಸವಣ್ಣ ಶರಣ ಚಳುವಳಿ ಮೂಲಕ ಅನುಭವ ಮಂಟಪ ರಚಿಸಿದ್ದು ಸಹ ಕನ್ನಡದ ನೆಲದಲ್ಲೇ ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧೀಕಾರ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕನ್ನಡವನ್ನು ಮತ್ತೆ, ಮತ್ತೆ ನೆನಪಿಸಿಕೊಳ್ಳುವ ಹಬ್ಬವಾಗಿದೆ. ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಿಕ್ಕಿದಂತಾಗುತ್ತದೆ. ಕೆರೆಗದ್ದೆಯಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ . ಕರ್ನಾಟಕ ರಾಜ್ಯೋತ್ಸವವನ್ನು ಕೇವಲ ರಾಜ್ಯದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿರುವ ಕನ್ನಡಿಗರು ಸಹ ಕನ್ನಡ ಆಚರಿಸುತ್ತಿದ್ದಾರೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕ ರಾಜ್ಯ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಜ್ಯ. ನಾವು ಕನ್ನಡಿಗರು ಎಂಬುದೇ ನಮಗೆ ಹೆಮ್ಮೆ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವ ವಿದ್ಯಾಲಯದ ಎನ್‌.ಎಂ.ಎ.ಎಂ. ಇನ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಪ್ರೊಫೆಸರ್ ಡಾ. ಸುಂದೀಪ್‌ ಹೆಗ್ಡೆ ಮಾತನಾಡಿ, ಕನ್ನಡ ಏಕೀಕರಣಕ್ಕಾಗಿ ಹರಿದು ಹೋಗಿದ್ದ ಪ್ರಾಂತ್ಯವನ್ನು ಆಲೂರು ವೆಂಕಟರಾವ್‌, ಕೆಂಗಲ್‌ ಹನುಮಂತಯ್ಯ, ಕುವೆಂಪು, ಶಿವರಾಮ ಕಾರಂತ ಸೇರಿದಂತೆ ಹಲವಾರು ಸಾಹಿತಿಗಳು ಒಟ್ಟಾಗಿ ದುಡಿದಿದ್ದರು. 1973 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು ಎಂದರು.

ಇದೇ ಸಂದರ್ಭದಲ್ಲಿ ಕೆರೆಗದ್ದೆ ಹಿರಿಯರಾದ ಗುಲಾಬಿ ಶೆಡ್ತಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ದಿಶಾ, ಆದ್ಯ, ನಿರೀಕ್ಷ, ಧನ್ಯ ಶ್ರೀ ಅವರನ್ನು ಅಭಿನಂದಿಸಲಾಯಿತು. ಕೊಪ್ಪದ ಡೆಸ್ಟಿನಿ ಸ್ಕೂಲ್‌ ಆಫ್‌ ಡ್ಯಾನ್ಸ್‌ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೇರ್ ಬೈಲು ನಟರಾಜ, ಜಿಲ್ಲಾ ಹಾಪ್‌ ಕಾಮ್ಸ್‌ ಉಪಾಧ್ಯಕ್ಷ ಎನ್.ಪಿ.ರವಿ, ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ನುಗ್ಗಿ ಮಂಜುನಾಥ್‌, ಸೀತೂರು ಗ್ರಾಪಂ ಸದಸ್ಯ ಎನ್.ಪಿ. ರಮೇಶ್‌, ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಟಿ.ವೆಂಕಟೇಶ್‌, ಕೆರೆಗದ್ದೆ ಉದ್ಯಮಿ ಪ್ರಖ್ಯಾತ ಶೆಟ್ಟಿ,ಸಂಜನ, ಕೊಪ್ಪ ಕೃಷಿ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಎಚ್.ಎಲ್‌.ದೀಪಕ್, ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಕೆರೆಗದ್ದೆ ಪ್ರವೀಣ್‌ ಶೆಟ್ಟಿ, ಸೀತೂರು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಪ್ರಭಾಕರ ಮತ್ತಿತರರು ಇದ್ದರು.

Share this article