ಕಸಾಪ ಜಿಲ್ಲಾಧ್ಯಕ್ಷ ಹೇಳಿಕೆ, ಮುರ್ಕವಾಡ ಚೈತನ್ಯ ವಿದ್ಯಾಲಯದಲ್ಲಿ ಸಾಹಿತ್ಯ ಸಂಘ ಉದ್ಘಾಟನೆ
ಶೈಕ್ಷಣಿಕ ಭಾಷೆ ಯಾವುದೇ ಆಗಿರಲಿ, ಆದರೆ ನಮ್ಮ ಪ್ರತಿಯೊಬ್ಬರಲ್ಲೂ ನಮ್ಮ ನಾಡಭಾಷೆ ಕನ್ನಡ ಬಗ್ಗೆ ಅಭಿಮಾನ, ಗೌರವ ಮತ್ತು ಪ್ರೀತಿ ಇರಬೇಕು. ನಮ್ಮ ನಾಡು-ನುಡಿ ನಮ್ಮ ಅಸ್ಮಿತೆಯ ಪ್ರತಿಕವಾಗಬೇಕು, ಬದುಕಿನ ಭಾಗವಾಗಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ತಾಲೂಕಿನ ಮುರ್ಕವಾಡ ಗ್ರಾಮದ ಚೈತನ್ಯ ವಸತಿ ವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕನ್ನಡ ಸಾಹಿತ್ಯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಸಾಧನೆಗೆ ಭಾಷೆ ಎಂದೂ ಅಡ್ಡಿಯಾಗುವುದಿಲ್ಲ, ಉತ್ತಮ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಅರಿವು, ಸಾಮಾನ್ಯ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನ ಅತ್ಯಗತ್ಯವಾಗಿದೆ. ಕನ್ನಡವು ಭಾರತದ ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಒಂದಾಗಿದ್ದು, ಕರ್ನಾಟಕದ ಅಧಿಕೃತ ಭಾಷೆಯಾಗಿದೆ. 2006ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂಬ ಗೌರವ ಲಭಿಸಿದೆ. ಸುಮಾರು ಒಂದೂವರೆ ಸಾವಿರ ವರ್ಷಗಳ ನಿರಂತರ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡವು ವಿಶ್ವದ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಭಾರತಿ ವಿದ್ಯಾಪೀಠದ ಆಡಳಿತಾಧಿಕಾರಿ ಗುರುನಾಥ ಇನಾಮದಾರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯ, ಸಂಸ್ಕೃತಿ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದು ಹಾರೈಸಿದರು.