ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಸೀಮಿತವಾಗಿರದೆ ಕನ್ನಡ ನಿತ್ಯೋತ್ಸವ ಆಗಬೇಕು ಎಂದು ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ್ ಕರೆ ನೀಡಿದರು.
ಶುಕ್ರವಾರ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಮಕ್ಕಳಿಗೆ ಗಾದೆ ಹಾಗೂ ಒಗಟುಗಳ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೊಡ್ಡ, ದೊಡ್ಡ ನಗರಗಳಲ್ಲಿ ಬೇರೆ ರಾಜ್ಯದಿಂದ ಬಂದ ಬೇರೆ ಭಾಷಿಗರು ಕನ್ನಡ ಕಲಿಯದೆ ಅವರ ಭಾಷೆಯಲ್ಲೇ ಮಾತನಾಡುತ್ತಾರೆ. ಅವರು 3 ವರ್ಷ ಕನ್ನಡ ಕಲಿತರೆ ನೂರು ವರ್ಷದವರೆಗೂ ಅವರಿಗೆ ನಮ್ಮ ಕನ್ನಡ ಭಾಷೆ ಬರುತ್ತದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಈ ಹಿಂದೆ ಇದ್ದ ಒಗಟು, ಗಾದೆಗಳು ಈಗ ನಿಂತು ಹೋಗಿದೆ. ಅದನ್ನು ಪುನರ್ ಸ್ಥಾಪಿಸಲು ತಾಲೂಕು ಕಸಾಪ ಗ್ರಾಮೀಣ ಭಾಗ ದಲ್ಲಿ, ಶಾಲೆಗಳಲ್ಲಿ ಕನ್ನಡ ಗಾದೆ, ಒಗಟುಗಳ ರಸಪ್ರಶ್ನೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಸರ್ಕಾರ ಕನ್ನಡ ಶಾಲೆಗಳಿಗೆ ಕಲಿತ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ತರಬೇಕು ಎಂದು ಒತ್ತಾಯಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಭಾಷಣ ಮಾಡಿ, ಕನ್ನಡ ಭಾಷೆ ಸುಲಲಿತವಾಗಿ ಮಾತನಾಡುವ, ಭಾವನೆ ಬೆಸೆಯುವ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಬರೆದಿದ್ದನ್ನೇ ಓದಬಹುದು. ಓದಿದ್ದನ್ನೇ ಬರೆಯಬಹುದು. ಕನ್ನಡ ಭಾಷೆ ಲಿಪಿಗಳ ರಾಣಿ ಎಂದು ಕರೆಯಲಾಗುತ್ತಿದೆ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ ಮೂಡಬಾಗಿಲು ಜ್ಞಾನ ಗಂಗೋತ್ರಿ ಪ್ರೌಢ ಶಾಲೆ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಂ.ಎಸ್.ಸುರಕ್ಷಿತ ಎಂಬ ವಿದ್ಯಾರ್ಥಿನಿಯನ್ನು ಕಸಾಪಯಿಂದ ಸನ್ಮಾನಿಸಲಾಯಿತು. ಗಾದೆ ಹಾಗೂ ಒಗಟುಗಳ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಸಾಪ ಅಧ್ಯಕ್ಷ ಪೂರ್ಣೇಶ್ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಅತಿಥಿಗಳಾಗಿದ್ದ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು ಮಾತನಾಡಿ, ವಿದೇಶಿಯರು ವ್ಯಾಪಾರಕ್ಕೆ ಎಂದು ಭಾರತಕ್ಕೆ ಬಂದು ಇಂಗ್ಲೀಷ್ ಭಾಷೆ ಬಿಟ್ಟು ಹೋಗಿದ್ದಾರೆ. ಕನ್ನಡಿಗರು ಯಾವ ದೇಶದಲ್ಲಿದ್ದರೂ ಈಗಲೂ ಕನ್ನಡ ಪ್ರೀತಿಸುತ್ತಾರೆ. ಅಮೆರಿಕದಲ್ಲಿ ಪ್ರತಿ ವರ್ಷ ಅಕ್ಕ ಸಮ್ಮೇಳನ ನಡೆಸುತ್ತಾರೆ ಎಂದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಅಧ್ಯಕ್ಷ ಬನ್ನೂರು ಪ್ರಕಾಶ್, ಶಿವಮೂರ್ತಿ, ಕೆ.ಎಚ್.ಸೋಮಶೇಖರ್, ಪ್ರದೀಪ್ ಇದ್ದರು.