ಸಾಹಿತ್ಯದ ಗತವೈಭವ ಮರುಕಳಿಸಬೇಕು

KannadaprabhaNewsNetwork | Published : Jan 16, 2024 1:47 AM

ಸಾರಾಂಶ

ಶ್ರೀರಾಮ ಪಿತೃವಾಕ್ಯ ಪರಿಪಾಲಕ ಎಂದು ಹೇಳುವ ನಾವು ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ಇದು ತಪ್ಪಬೇಕು. ಭೂಮಿಗಿರಿ ನಾರಾಯಣಪ್ಪ ಅವರಂಥವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆ ಮೂಲಕ ಸಮಾಜದ ಪರಿವರ್ತನೆಗೆ ಕಾರಣಕರ್ತರಾಗಬೇಕು

- ಶಾಸಕ ಕೆ. ಹರೀಶ್‌ ಗೌಡ ಆಶಯ

- ಮೂವರು ಸಾಧಕರಿಗೆ ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ

- ಕ್ಯಾಲೆಂಡರ್ ಬಿಡುಗಡೆ, ಗಾನ-ನಂದನ ಲಾಂಛನ ಅನಾವರಣ, ಸಂಗೀತ ಸಂಜೆಕನ್ನಡಪ್ರಭ ವಾರ್ತೆ ಮೈಸೂರು

ಸಾಹಿತ್ಯದ ಗತವೈಭವ ಮರುಕಳಿಸಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನದ ವತಿಯಿಂದ ಸೋಮವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿಂದೆ ಸಾಹಿತ್ಯದ ಕಾರ್ಯಕ್ರಮಗಳು ಮೇಳೈಸುತ್ತಿದ್ದವು. ಸಿಪಿಕೆ ಅವರಾದಿಯಾಗಿ ಹಲವಾರು ಗಣ್ಯಮಾನ್ಯರು ಮೈಸೂರಿನಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಕೂಡ ಅದೇ ರೀತಿ ಆಗಬೇಕು. ಇದಕ್ಕಾಗಿಯೇ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಏರ್ಪಡಿಸಲಾಗುತ್ತಿದೆ ಎಂದರು.

ಗಾನ-ನಂದನ ಲಾಂಛನ ಅನಾವರಣ ಮಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಜ್ಞಾನ ಭಂಡಾರವನ್ನು ಹಂಚಬೇಕು. ದುಡ್ಡು ಮತ್ತು ಬ್ಲಡ್ಡು ಒಂದೆಡೆ ಸಂಗ್ರಹವಾಗಬಾರದು. ಹಂಚಿದಷ್ಟು ಬೆಳೆಯುತ್ತದೆ ಎಂದರು.

ಶ್ರೀರಾಮ ಪಿತೃವಾಕ್ಯ ಪರಿಪಾಲಕ ಎಂದು ಹೇಳುವ ನಾವು ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ಇದು ತಪ್ಪಬೇಕು. ಭೂಮಿಗಿರಿ ನಾರಾಯಣಪ್ಪ ಅವರಂಥವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆ ಮೂಲಕ ಸಮಾಜದ ಪರಿವರ್ತನೆಗೆ ಕಾರಣಕರ್ತರಾಗಬೇಕು ಎಂದು ಅವರು ಕರೆ ನೀಡಿದರು.

ಪ್ರಸ್ತುತ ಶಿಕ್ಷಣಕ್ಕೆ ಅಪಾರ ಬೆಲೆ ಇರುವುದರಿಂದ ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸಾಧಕರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ತಾಂಡವಪುರ ಎಂಐಟಿ ಪ್ರಾಂಶುಪಾಲ ಡಾ.ವೈ.ಟಿ. ಕೃಷ್ಣೇಗೌಡ, ಲೇಖಕಿ ಬಿ.ಕೆ. ಮೀನಾಕ್ಷಿ ಅವರಿಗೆ ಲಯನ್ ಮಾಜಿ ಜಿಲ್ಲಾ ರಾಜ್ಯಪಾಲ ನಾಗರಾಜ ವಿ. ಭೈರಿ ಅವರು ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮುಖ್ಯ ಅತಿಥಿಗಳಾಗಿದ್ದರು.

ಭೂಮಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಚೀಲೂರು ಚಂದ್ರಶೇಖರ್ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಡಾ.ಬಿ.ಎನ್. ರವೀಶ್ ಪರಿಚಯಿಸಿದರು. ಶ್ರೀಲತಾ ಮನೋಹರ್ ಪ್ರಾರ್ಥಿಸಿದರು.

ನಂತರ ಡಾ.ವೈ.ಡಿ. ರಾಜಣ್ಣ, ಎನ್. ಬೆಟ್ಟೇಗೌಡ, ಡಾ.ಬಿ.ಎನ್. ರವೀಶ್, ಡಾ.ಎ.ಎಸ್. ಪೂರ್ಣಿಮಾ, ಶ್ರೀಲತಾ ಮನೋಹರ್, ಸಿ.ಎಸ್. ವಾಣಿ ಸಂಗೀತ ಸಂಜೆ ನಡೆಸಿಕೊಟ್ಟರು.

Share this article