ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆ ಕೈಬಿಡುವಂತೆ ಕನ್ನಡ ಸೇನೆ ಮನವಿ

KannadaprabhaNewsNetwork | Published : Jun 16, 2025 2:03 AM

ವಿರೋಧದ ನಡುವೆಯೂ ಅಮ್ಯೂಸ್ ಮೆಂಟ್ ಪಾರ್ಕ್ ಅಭಿವೃದ್ಧಿ ಮತ್ತು ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕ ತೆರಿಗೆ ಹಣದ ಬಳಕೆ ಎಷ್ಟರ ಮಟ್ಟಿಗೆ ಸರಿ?, 90 ಕೋಟಿ ರು. ವೆಚ್ಚದ ಕಾವೇರಿ ಆರತಿ ಕೈಬಿಟ್ಟು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು.

ಕನ್ನಡ ಪ್ರಭ ವಾರ್ತೆ ಮಂಡ್ಯ

ಕೆಆರ್ ಎಸ್ ಜಲಾಶಯದ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ಆರತಿ ಯೋಜನೆ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ ಸಂಘಟನೆಗಳ ಸಭೆಯಲ್ಲಿ ಮುಖಂಡರು ವಿರೋಧ ಮಾಡುತ್ತಿದ್ದೀರಿ, ಯೋಜನೆ ಕೈ ಬಿಡುತ್ತೇವೆ ಎಂದು ಹೇಳಿದ್ದರು. ಆದರೆ, ಕಾಮಗಾರಿ ಮತ್ತೆ ಪ್ರಾರಂಭವಾಗಿದೆ ಎಂದರು.

ವಿರೋಧದ ನಡುವೆಯೂ ಅಮ್ಯೂಸ್ ಮೆಂಟ್ ಪಾರ್ಕ್ ಅಭಿವೃದ್ಧಿ ಮತ್ತು ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕ ತೆರಿಗೆ ಹಣದ ಬಳಕೆ ಎಷ್ಟರ ಮಟ್ಟಿಗೆ ಸರಿ? 90 ಕೋಟಿ ರು. ವೆಚ್ಚದ ಕಾವೇರಿ ಆರತಿ ಕೈಬಿಟ್ಟು ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಆಗ್ರಹಿಸಿದರು.

ಸಂಘಟನೆ ಜಿಲ್ಲಾ ಮಹಿಳಾ ಅಧ್ಯಕ್ಷೆ ಸೌಭಾಗ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ರಾಜ್ಯ ಸಂಚಾಲಕ ಜಿ. ಮಹಾಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ಜಯಮ್ಮ, ಶಾಲಿನಿ, ಮಂಗಳಮ್ಮ, ವೇಣುಗೋಪಾಲ್, ಪ್ರಸನ್ನ, ಮದ್ದೂರು ತಾಲೂಕು ಅಧ್ಯಕ್ಷ ರಾಘವೇಂದ್ರ, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ರಘು, ಕುಮಾರ್, ಅಭಿಷೇಕ್, ರಾಜೇಶ್ ಇದ್ದರು.

ಆಲಕೆರೆಯಲ್ಲಿ 16 ರಂದು ರೈತರ ಶಾಲೆ ಉದ್ಘಾಟನೆ: ಸತ್ಯಮೂರ್ತಿ

ಮಂಡ್ಯ: ವ್ಯವಸಾಯ, ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ಅರಿವು ಮೂಡಿಸಲು ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜೂ.16 ರಂದು ತಾಲೂಕಿನ ಆಲಕೆರೆ ಗ್ರಾಮದಲ್ಲಿ ರೈತರ ಶಾಲೆ ಉದ್ಘಾಟನೆಯಾಗಲಿದೆ ಎಂದು ಸಂಘದ ಕಾರ್‍ಯದರ್ಶಿ ಸತ್ಯಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಕೊರತೆಯ ಕಾರಣ ನಷ್ಟ ಅನುಭವಿಸುವಂತಾಗಿದೆ ಎಂದರು.

ರೈತರನ್ನು ಕೃಷಿಯಲ್ಲಿ ಶಿಕ್ಷಿತರನ್ನಾಗಿ ಮಾಡುವ ಉದ್ದೇಶದಿಂದ ಪ್ರತಿನಿತ್ಯ ಸಂಜೆ 6.30 ರಿಂದ 7.30 ಅಥವಾ 8.30ರವರೆಗೆ ಕೃಷಿ ಬಗ್ಗೆ ಶಾಲೆ ನಡೆಸುವ ಚಿಂತನೆ ಬಂದಿತ್ತು. ಅದನ್ನು ಪ್ರಾರಂಭಿಕವಾಗಿ ಆಲಕೆರೆ ಗ್ರಾಮದಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದೇವೆ. ರೈತರಿಗೆ ಅನುಕೂಲವಾದಲ್ಲಿ ನಾವು ಹಂತ ಹಂತವಾಗಿ ಜಿಲ್ಲೆಯ ಎಲ್ಲೆಡೆ ರೈತ ಶಾಲೆಯನ್ನು ವಿಸ್ತರಿಸಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.

ಜೂ.16 ರಂದು ಬೆಳಗ್ಗೆ 10.30ಕ್ಕೆ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶಾಸಕ ಪಿ.ರವಿಕುಮಾರ್ ರೈತರ ಶಾಲೆ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಆರ್. ಶಶಿಧರ್ ಅಧ್ಯಕ್ಷತೆ ವಹಿಸುವರು. ಸಂಘದ ಖಚಾಂಚಿ ಪಿ. ಪ್ರದೀಪ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡುವರು. ಜಿಲ್ಲಾಧಿಕಾರಿ ಡಾ.ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್, ಕೃಷಿ ವಿವಿ ವಿಶೇಷಾಧಿಕಾರಿ ಡಾ. ಕೆ.ಎಂ. ಹರಿಣಿಕುಮಾರ್ ಗೌರವ ಆಹ್ವಾನಿತರಾಗಿ ಭಾಗವಹಿಸುವರು ಎಂದು ಹೇಳಿದರು.

ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಪಿಇಟಿ ಅಧ್ಯಕ್ಷ ವಿಜಯಾನಂದ, ಮನ್ಮುಲ್ ಅಧ್ಯಕ್ಷ ಯು.ಸಿ. ಶಿವಕುಮಾರ್, ನಿರ್ದೇಶಕ ಎಂ.ಎಸ್. ರಘುನಂದನ್, ಜಿಲ್ಲಾ ಕಾರ್‍ಯಾಧ್ಯಕ್ಷ ಎಂ.ಎಸ್. ಚಿದಂಬರ್ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಂದೀಶ, ಜಗದೀಶ್, ಕಿರಣ್‌ಕುಮಾರ್, ಚೇತನ್‌ಕುಮಾರ್ ಇತರರು ಇದ್ದರು.