ಜೋಯಿಡಾ: ರಾಜ್ಯದ ಗಡಿ ತಾಲೂಕಿನಲ್ಲಿ ಕನ್ನಡ ಬೆಳೆಯಬೇಕು. ಇಲ್ಲಿನ ಮಿತ್ರ ಭಾಷಿಕರು ಕನ್ನಡವನ್ನು ನಿರರ್ಗಳವಾಗಿ ಮಾತನಾಡುವಂತಾಗಬೇಕು. ನಮ್ಮ ಕನ್ನಡ ಭಾಷೆ, ನೆಲದ ಮೇಲಿನ ಪ್ರೀತಿ ಗೌರವ ಮೂಡುವಂತಾಗಬೇಕು ಎಂದು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ ಹಾನಗಲ್ ಹೇಳಿದರು.
ಜೋಯಿಡಾ ಗಡಿ ತಾಲೂಕು ಏಳು ಭಾಷೆಗಳನ್ನಾಡುವ ವಿಶಿಷ್ಟ ಗಡಿ ತಾಲೂಕು. ಇಲ್ಲಿನ ಬಹುತೇಕ ಮಿತ್ರ ಭಾಷಿಕರು ಕನ್ನಡವನ್ನು ಅರ್ಥೈಸಿಕೊಳ್ಳುತ್ತಾರೆ. ಆದರೆ ಮಾತನಾಡುವವರು ಕಡಿಮೆ. ಇಲ್ಲಿನ ಗ್ರಾಮೀಣ ಭಾಗದ ಮಕ್ಕಳಲ್ಲಿಯೂ ಕನ್ನಡದ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿ ಕನ್ನಡ ಕಲಿಕಾ ಕೇಂದ್ರವನ್ನು ಸ್ಥಾಪಿಸುವ ಮೂಲಕ ಮುಂದಿನ ದಿನದಲ್ಲಿ ಇಲ್ಲಿ ಎಲ್ಲರೂ ಕನ್ನಡವನ್ನು ಕಲಿಯಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ನಮ್ಮ ತಾಲೂಕಿಗೆ ಕಲಿಕಾ ಕೇಂದ್ರದ ಅವಶ್ಯಕತೆ ಇದೆ. ಪ್ರಾಧಿಕಾರದ ಕಾರ್ಯದರ್ಶಿಯಲ್ಲಿ ಮನವಿ ಮಾಡಿದ ತಕ್ಷಣವೇ ನಮಗೆ ಎರಡು ಕಲಿಕಾ ಕೇಂದ್ರಕ್ಕೆ ಮಂಜೂರಿ ನೀಡಿದರು. ಅವರೇ ಸ್ವತಃ ಇಲ್ಲಿಗೆ ಬಂದು ಉದ್ಘಾಟಿಸಿ ಕೊಟ್ಟಿರುವುದು ಹೆಮ್ಮೆಯ ಸಂಗತಿ. ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ, ನಂದಿಗದ್ದೆ ಗ್ರಾಪಂ ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿದರು.
ಕ್ಯಾಪ್ಶನ್: ಜೋಯಿಡಾದ ಉಳವಿ ಚೆನ್ನಬಸವೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ಕಲಿಕಾ ಕೇಂದ್ರ ಉದ್ಘಾಟಿಸಿ ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ ಹಾನಗಲ್ ಮಾತನಾಡಿದರು.