ಗೋಕರ್ಣ: ಮರೆತು ಹೋದ ಕನ್ನಡದ ಪದಗಳನ್ನು ನೆನಪಿಸಿ ಚಾಲ್ತಿಗೆ ತರುವ ಜತೆಗೆ ಆಧುನಿಕ ಜಗತ್ತಿನ ಹೊಸ ಅನ್ವೇಷಣೆಗಳಿಗೆ ಕನ್ನಡ ಪದಗಳನ್ನು ಸೃಜಿಸುವ ಕಾರ್ಯ ಆಗಬೇಕಿದೆ ಎಂದು ರಾಘವೇಶ್ವರ ಭಾರತೀ ಶ್ರೀ ನುಡಿದರು.
ದಿನಕ್ಕೊಂದು ಇಂಗ್ಲಿಷ್ ಪದತ್ಯಾಗ ಅಭಿಯಾನದಲ್ಲಿ ಶನಿವಾರ ಆನ್ಲೈನ್ ಪದಕ್ಕೆ ಕನ್ನಡ ಪದವನ್ನು ಸೂಚಿಸಿದ ಶ್ರೀಗಳು, ಸಂಸ್ಕೃತದ ಸಂಪೃತ್ತ ಎಂಬ ಶಬ್ದ ಇದಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಪಾರ್ವತಿ ಪರಮೇಶ್ವರರ ಸಂಪರ್ಕಕ್ಕೆ ಕಾಳಿದಾಸ ಈ ಪದವನ್ನು ಬಳಸಿದ್ದಾರೆ. ಆನ್ಲೈನ್ ಕೂಡ ಇಂಥ ಸಂಪರ್ಕ ಸಾಧಿಸುವ ಪರಿಕಲ್ಪನೆಯಾಗಿದ್ದರಿಂದ ಈ ಪದ ಬಳಕೆ ಯೋಗ್ಯ. ಆದರೆ ಜನಬಳಕೆಗೆ ಇದು ಕಷ್ಟ ಎಂದಾದಲ್ಲಿ, ದೂರಗ್ರಾಹಿ, ದೂರವೇದಿ, ಅಂತರಾಳಕದಂಥ ಶಬ್ದಗಳನ್ನು ಬಳಸಬಹುದು ಎಂದು ಸಲಹೆ ಮಾಡಿದರು.
ಇಂಗ್ಲಿಷ್ ಮಾಯೆ ನಮಗೆ ಅರಿವಿಲ್ಲದಂತೆಯೇ ನಮ್ಮ ಭಾಷೆಯಲ್ಲಿ ನುಸುಳಿಕೊಂಡಿದ್ದು, ಭಾಷೆಯನ್ನು ಶುದ್ಧೀಕರಿಸುವ ಅಗತ್ಯತೆಯನ್ನು ಸಮಾಜ ಒಪ್ಪಿಕೊಂಡಿದೆ. ಇದು ಅನುಷ್ಠಾನಕ್ಕೆ ಬರಬೇಕಿದ್ದು, ಇದಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸ್ವಭಾಷಾ ಚಾತುರ್ಮಾಸ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಕನ್ನಡವನ್ನು ಮಾತನಾಡುವಾಗ ಇಂಥ ಅರ್ಥಪೂರ್ಣ, ಹೊಸ ಪ್ರಯತ್ನವನ್ನು ಮಾಡೋಣ. ಅನಿವಾರ್ಯ ಎಂಬ ಸಂದರ್ಭದಲ್ಲಿ ಇಂಗ್ಲಿಷ್ ಮಾತನಾಡುವಾಗ ಆ ಭಾಷೆ ಮಾತನಾಡೋಣ. ಆದರೆ ನಮ್ಮ ಭಾಷೆಯ ನಡುವೆ ಇಂಗ್ಲಿಷ್ ಪದಗಳ ಬಳಕೆ ಬೇಡ ಎಂದು ಸ್ಪಷ್ಟಪಡಿಸಿದರು.
ಸ್ವಭಾಷೆ ನಮ್ಮ ಸಹಜತೆ; ಪರಕೀಯ ಭಾಷೆ ಕೃತ್ರಿಮತೆಯ ಸಂಕೇತ. ಮರೆತು ಹೋದ ಮನೆಮಾತನ್ನು ನೆನಪಿಸುವ ಮೂಲಕ ನಮ್ಮತನವನ್ನು ತಂದುಕೊಡುವ ಪ್ರಯತ್ನ ಇದಾಗಿದ್ದು, ಒಳ್ಳೆಯ ಬದಲಾವಣೆಗೆ ಸಮಾಜ ತೆರೆದುಕೊಳ್ಳಲಿ ಎಂದು ಆಶಿಸಿದರು.ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ವತಿಯಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಶ್ರುತಿ ರಂಜಿನಿ ಗಾಯನ ಪ್ರಸ್ತುತಪಡಿಸಿದರೆ, ಮೃದಂಗ ವಾದಕ ಜಯಚಂದ್ರ ರಾವ್ ಸಾಥ್ ನೀಡಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಸಂಗೀತ ಶಿಕ್ಷಕ ರಘುನಂದನ್ ಬೇರ್ಕಡವು, ಚಾತುರ್ಮಾಸ್ಯ ತಂಡದ ವಿಷ್ಣುಮೂರ್ತಿ ಹೆಗಡೆ, ನಿಖಿಲ್, ಅಜಿತ್ ಗುಡ್ಗೆ, ವಿಷ್ಣುಬನಾರಿ, ರಾಘವೇಂದ್ರ ಎನ್.ಆರ್, ಅರವಿಂದ ಧರ್ಬೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು.