ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯ ಸರ್ಕಾರ ₹158 ಕೋಟಿ ಖರ್ಚು ಮಾಡಿ ಕಾಂತರಾಜ ಆಯೋಗ ವೈಜ್ಞಾನಿಕವಾಗಿ ವರದಿ ತಯಾರಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗಾಗಲೇ ಜಾತಿ ಗಣತಿ ವರದಿ ಸಲ್ಲಿಸಿದ್ದು, ಅದನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಆದರೆ ಕೆಲವರು ಇದನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.ನಗರದಲ್ಲಿ ನಡೆದ ಶೋಷಿತ ವರ್ಗಗಳ ಮುಖಂಡರ ಪಕ್ಷಾತೀತ ಹೋರಾಟದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತಿ ಜನಗಣತಿ ವರದಿ ಜಾರಿಗೆ ಪಕ್ಷಾತೀತವಾಗಿ ಆಗ್ರಹಿಸುತ್ತಿರುವುದಾಗಿ ಹೇಳಿದರು. ಕರ್ನಾಟಕ ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಹಾಗೂ ವೀರಶೈವ ಲಿಂಗಾಯತ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವರದಿ ಅವೈಜ್ಞಾನಿಕವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಇದನ್ನು ಖಂಡಿಸುತ್ತಿದ್ದು, ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಕಾಂತರಾಜ ಆಯೋಗದ ವರದಿಯನ್ನು ಮುಂದಿನ ಸಂಪುಟ ಸಭೆಯಲ್ಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಶೋಷಿತ ವರ್ಗಗಳೆಲ್ಲ ಎಚ್ಚೆತ್ತುಕೊಂಡಿರುವುದು ಸೂಕ್ತವಾಗಿದೆ. ಕಾಂತರಾಜು ವರದಿ ಬಿಡುಗಡೆಯಾಗಲಿ. ಕೆಲವರು ವಿರೋಧಿಸುತ್ತಿರುವುದು ಸೂಕ್ತವಲ್ಲ. ಈ ಕುರಿತು ಹಳ್ಳಿಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಅಹಿಂದ ಮುಖಂಡ ಎಸ್.ಎಂ.ಪಾಟೀಲ್ ಗಣಿಹಾರ ಮಾತನಾಡಿ, ಎಲ್ಲೋ ಕುಳಿತು ಕಾಂತರಾಜ ವರದಿ ತಯಾರು ಮಾಡಿದ್ದಲ್ಲ. ಹಳ್ಳಿ ಹಳ್ಳಿಗಳಲ್ಲಿ, ಮನೆ ಮನೆ ಮನೆ ತಿರುಗಾಡಿ ಮಾಡಿದ ವರದಿ ಎಂದು ಹೇಳಿದರು.
ಜಾಗೃತಿ ಸಭೆ ನಡೆಸಲು ನಿರ್ಧಾರ:ಮಾಜಿ ಶಾಸಕ ರಾಜು ಆಲಗೂರ ನೇತೃತ್ವದಲ್ಲಿ ಜನಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ವಿಜಯಪುರದಲ್ಲಿ ಜಿಲ್ಲಾ ಶೋಷಿತ ವರ್ಗಗಳ ಸಭೆ ನಡೆಸಲಾಯಿತು. ದೀಪಾವಳಿ ಹಬ್ಬದ ನಂತರ ಪ್ರತಿ ಹೋಬಳಿ, ತಾಲೂಕು ಮಟ್ಟದಲ್ಲಿ ಪ್ರವಾಸ ಮಾಡಿ ಜನಜಾಗೃತಿ ಸಭೆಗಳನ್ನು ಏರ್ಪಡಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶರಣಪ್ಪ ಸುಣಗಾರ, ಮುಖಂಡರಾದ ಅಬ್ದುಲ್ಹಮೀದ ಮುಶ್ರೀಫ್, ಬಿ.ಡಿ.ಪಾಟೀಲ, ಮಹ್ಮದರಫೀಕ್ ಟಪಾಲ, ಜಕ್ಕಪ್ಪ ಯಡವೆ, ಬಿ.ಎಸ್.ಗಸ್ತಿ, ಮಾರುತಿ ಬಂಡಿ, ಶ್ರೀಶೈಲ ತಡಲಗಟ್ಟಿ, ಅಭಿಷೇಕ ಚಕ್ರವರ್ತಿ, ಎಂ.ಸಿ.ಮುಲ್ಲಾ, ಪ್ರಕಾಶ ಸೊನ್ನದ, ಎಂ.ಜಿ. ಯಂಕಂಚಿ, ಸಂಜು ಕಂಬಾಗಿ, ಅಡಿವೆಪ್ಪ ಸಾಲಗಲ್, ಮಲ್ಲು ಬಿದರಿ, ರಾಜಶೇಖರ ಯಡಹಳ್ಳಿ, ಎಂ.ಆರ್.ತಾಂಬೋಳಿ, ಗಣೇಶ ಕಬಾಡೆ, ಪ್ರಕಾಶ ನಾವಿ, ಫಯಾಜ್ ಕಲಾದಗಿ, ವಸಂತ ಹೊನಮೊಡೆ, ದಾನಪ್ಪ ಕಟ್ಟಿಮನಿ, ಶಿವಪುತ್ರಪ್ಪ ತಳಬಂಡಾರಿ, ಬೀರಪ್ಪ ಸಾಸನೂರ, ಕೃಷ್ಣಾ ಕಾಮಟೆ, ಸಾಹೇಬಗೌಡ ಬಿರಾದಾರ, ದಾದಾಪೀರ ಬಡಕಲ್, ಪರಶುರಾಮ ಹೊಸಮನಿ, ಮಹಾದೇವ ರಾವಜಿ, ದಯಾನಂದ ಲಚ್ಯಾಣ ಸೇರಿದಂತೆ ಹಲವರು ಭಾಗವಹಿಸಿದ್ದರು.ಕೋಟ್
ಜಾತಿಗಣತಿ ಬಿಡುಗಡೆಗೆ ಕೆಲ ಒಕ್ಕಲಿಗ ಹಾಗೂ ಲಿಂಗಾಯತ ಸಮಾಜದ ಶಾಸಕರು, ಮುಖಂಡರು ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ ಗಾಂಧಿ ಪಾರ್ಲಿಮೆಂಟ್ ನಲ್ಲಿ ನಿಂತು ಈ ವಿಚಾರಕ್ಕೆ ಹೋರಾಟ ಮಾಡುತ್ತೇನೆ. ಶೋಷಿತರಿಗೆ ನ್ಯಾಯ ಕೊಡಿಸುತ್ತೇನೆ ಎಂದಿದ್ದಾರೆ. ಆದರೆ, ಅವರದ್ದೇ ಸರ್ಕಾರ ರಾಜ್ಯದಲ್ಲಿರುವುದರಿಂದ ವಿರೋಧಿಸುವುದು ತಪ್ಪಾಗುತ್ತದೆ.ಎಸ್.ಎಂ.ಪಾಟೀಲ್ ಗಣಿಹಾರ, ಅಹಿಂದ ಮುಖಂಡ