ಫೋಟೋ - 21ಎಂವೈಎಸ್ 61ಕನ್ನಡಪ್ರಭ ವಾರ್ತೆ ನಂಜನಗೂಡುನಗರದ ಕಪಿಲಾ ನದಿ ತೀರದ ಸ್ನಾನಘಟ್ಟದಲ್ಲಿ ಯುವ ಬ್ರಿಗೇಡ್ ಭಾನುವಾರ ಆಯೋಜಿಸಿದ್ದ ಕಪಿಲಾ ಆರತಿ,ಲಕ್ಷ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.ರಾತ್ರಿ 7.30 ರ ಸಮಯದಲ್ಲಿ ನದಿಯಲ್ಲಿನ ಹದಿನಾರು ಕಾಲು ಮಂಟಪದಲ್ಲಿ ಸ್ಥಾಪಿಸಲಾಗಿದ್ದ ಶಿವ ಲಿಂಗಕ್ಕೆ ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜೀ, ಸ್ವಾಮಿ ಪ್ರಮಥಾಧಿಪಾನಂದ ಹಾಗೂ ಗೋಪಾಜೀ ಅವರು ಅಷ್ಟತೀರ್ಥಗಳ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ದೋಣಿಯ ಮೂಲಕ ಗಣ್ಯರನ್ನು ನದಿಯ ಮಧ್ಯದಲ್ಲಿ ಕಟ್ಟಿದ್ದ ವೇದಿಕೆಗೆ ಕರೆದೊಯ್ಯಲಾಯಿತು.ವೇದಿಕೆಯಲ್ಲಿನ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ವಿಶ್ವ ಹಿಂದೂಪರಿಷತ್ ಕಾರ್ಯದರ್ಶಿ ಗೋಪಾಲ್, ಹಾಲು ಕೊಡುವ ಗೋವನ್ನು ಗೋಮಾತೆ, ಜೀವ ಜಲ ನೀಡುವ ನದಿಗಳನ್ನು ಗಂಗಾಮಾತಾ, ತುಂಗಾಮಾತಾ, ಕಪಿಲಾ ಮಾತಾ ಎಂದು ಕರೆದು ತಾಯಿಯ ಸ್ಥಾನ ನೀಡಿ ಪೂಜಿಸವ ಶ್ರೇಷ್ಟ ಪರಂಪರೆ, ಸಂಸ್ಕೃತಿ ನಮ್ಮದು, ಇಂತಹ ನದಿಗಳಿಗೆ ತ್ಯಾಜ್ಯ, ಹಳೇ ಬಟ್ಟೆಗಳನ್ನು ಬಿಟ್ಟು ನದಿ ನೀರನ್ನು ಕಲುಷಿತಗೊಳಿಸಬಾರದು ಎಂದರು.ಯುವ ಬ್ರಿಗೇಡ್ ಸಾರ್ವಜನಿಕರ ಸಹಕಾರದಿಂದ ಕಳೆದ 10 ವರ್ಷಗಳಿಂದ ಕಪಿಲಾ ನದಿಯನ್ನು ಸ್ವಚ್ಛಗೊಳಿಸಿ, ಕಪಿಲಾ ಆರತಿ ಕಾರ್ಯಕ್ರಮ ನಡೆಸುತ್ತಿದೆ, ಮೊದಲಿಗೆ ನದಿಯಲ್ಲಿ ಟನ್ ಗಟ್ಟಲೆ ತ್ಯಾಜ್ಯ ತೆಗೆಯಲಾಗುತ್ತಿತ್ತು, ಕಪಿಲಾ ಆರತಿ ಕಾರ್ಯಕ್ರಮ ನಡೆಸಿದ ಮೇಲೆ ನದಿಗೆ ತ್ಯಾಜ್ಯ ಎಸೆಯುವ ಪ್ರವೃತ್ತಿ ಕಡಿಮೆಯಾಗಿದೆ. ಹಲವು ಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಸಾಕಾರಗೊಂಡಿದೆ, ಇದುವರೆಗೆ 11 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ, ಶ್ರೀರಾಮಚಂದ್ರನ ದರ್ಶನ ಪಡೆದಿದ್ದಾರೆ. ಹೀಗೆ ನಮ್ಮ ಸಂಸ್ಕೃತಿ,ಆಚಾರ ವಿಚಾರಗಳ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಮೂಡಬೇಕು, ಪ್ರಕೃತಿ,ನದಿ,ಗೀಡ,ಮರಗಳಲ್ಲಿ ದೇವರನ್ನು ಕಾಣುವ ನಾವು ಅವುಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜೀ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ಪವಿತ್ರವಾದ ಸ್ಥಾನವಿದೆ, ಕಪಿಲೆಯಲ್ಲಿ ದಿನಂಪ್ರತಿ ಪುಣ್ಯ ಸ್ನಾನ ಮಾಡುವ ಸಾವಿರಾರು ಭಕ್ತರು ತಮ್ಮ ಪಾಪ ಕಳೆದುಕೊಂಡು ಪುನೀತರಾಗುತ್ತಾರೆ. ಇಂತಹ ಪುಣ್ಯ ನದಿಗೆ ತ್ಯಾಜ್ಯವನ್ನು ಎಸೆದು ಮಲೀನಗೊಳಿಸಬಾರದು, ಯುವ ಬ್ರಿಗೇಡ್ ನದಿಯನ್ನು ಸ್ವಚ್ಛಗೊಳಿಸುವ ಮೂಲಕ ನಮ್ಮ ಧರ್ಮ,ಸಂಸ್ಕೃತಿಯ ರಕ್ಷಣೆ ಮಾಡುತ್ತಿದೆ. ಯುವ ಬ್ರಿಗೇಡ್ ನ ಯುವಕರ ಸಮಾಜ ಸೇವಾ ಕಾರ್ಯಗಳಿಗೆ ಜನತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕೃಷ್ಣ ಜೋಯಿಸ್ ನೇತೃತ್ವದ 5 ಮಂದಿ ಖುತ್ವಿಕರು ಕಪಿಲಾ ನದಿಗೆ ಧೂಪ, ದೀಪದ ಆರತಿ ಬೆಳೆಗಿದರು, ನದಿಯ ಸೋಪಾನ ಕಟ್ಟೆಯ ಮೇಲೆ ಮಹಿಳೆಯರು ಲಕ್ಷಾಂತರ ದೀಪಗಳನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿದರು, ಯುವಕರು ಹದಿನಾರು ಕಾಲು ಮಂಟಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಎಸ್. ಚಂದ್ರ ಶೇಖರ್, ತಾಲೂಕು ಸಂಚಾಲಕ ನಿತೀನ್, ಗಿರೀಶ್, ಸುನೀಲ್, ಸುರೇಶ್, ಎನ್.ವಿ. ರವಿಶಾಸ್ತ್ರಿ, ಚರಣ್, ಕಿಶೋರ್, ಅರ್ಜುನ್, ಮಹದೇವ ಇದ್ದರು.