ಕನ್ನಡಪ್ರಭ ವಾರ್ತೆ ಕಾಪು
ಸ್ವಂತ ಇಚ್ಛಾಶಕ್ತಿಯಿಂದ ಸಾರ್ವಜನಿಕರು ಸ್ವಚ್ಛತೆಯಲ್ಲಿ ತೊಡಗಬೇಕು, ಆಗ ನಮ್ಮ ನಗರ ಸ್ವಚ್ಚವಾಗುತ್ತದೆ. ಸ್ವಚ್ಛ ಪರಿಸರದಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಬೀದಿಗಳಿಗೆ ಬರುವ ಸರ್ಕಾರಿ ಕಸದ ಗಾಡಿಗಳಿಗೆ ಕಸವನ್ನು ನೀಡಬೇಕು. ಎಲ್ಲೆಂದರಲ್ಲಿ ಎಸೆಯಬಾರದು. ಬ್ಲೇಡ್ ಮುಂತಾದ ಅಪಾಯಕಾರಿ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಸ್ವಚ್ಛತಾ ಸಿಬ್ಬಂದಿಯ ಬಗ್ಗೆಯೂ ಯೋಚಿಸಿ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಹೇಳಿದ್ದಾರೆ.ಕಾಪು ತಾಲೂಕಿನ ಕಡಲ ಕಿನಾರೆ ಪ್ರದೇಶಗಳಾದ ಬಡಾ, ಉಚ್ಚಿಲ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಕಾಪು ತಹಸೀಲ್ದಾರ್ ಪ್ರತಿಭಾ ಭಾಗವಹಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಜೇಮ್ಸ್, ಗ್ರಾಮ ಅಭಿವೃದ್ಧಿ ಅಧಿಕಾರಿ ಸತೀಶ್, ಗ್ರಾಮ ಕರಣಿಕ ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸ್ವಚ್ಛತಾ ಸಿಬ್ಬಂದಿ ಹಾಗೂ ಇತರರು ಸಾಥ್ ನೀಡಿದರು.