ಕಾರವಾರ ಕಡಲತೀರದಲ್ಲಿ ಏ. 11ರಿಂದ ಕರಾವಳಿ ಭೀಮೋತ್ಸವ

KannadaprabhaNewsNetwork |  
Published : Mar 28, 2026, 02:15 AM IST
ಕರಾವಳಿ ಭೀಮೋತ್ಸವದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏ. 11ರಿಂದ 25ರ ವರೆಗೆ ಕರಾವಳಿ ಭೀಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಉತ್ಸವದ ಆಯೋಜಕ ಸಮಿತಿ ಅಧ್ಯಕ್ಷ ದೀಪಕ ಕುಡಾಲಕರ ತಿಳಿಸಿದ್ದಾರೆ.

ಕಾರವಾರ: ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏ. 11ರಿಂದ 25ರ ವರೆಗೆ ಕರಾವಳಿ ಭೀಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ ಎಂದು ಉತ್ಸವದ ಆಯೋಜಕ ಸಮಿತಿ ಅಧ್ಯಕ್ಷ ದೀಪಕ ಕುಡಾಲಕರ ತಿಳಿಸಿದ್ದಾರೆ.

ಗುರುವಾರ ನಗರದ ಪತ್ರಿಕಾಭವನದಲ್ಲಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏ. 11ರಂದು ನಗರದ ಅಂಬೇಡ್ಕರ್ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಭಾವಚಿತ್ರದ ಬೃಹತ್ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುವುದು. ಬಳಿಕ ಮಯೂರ ವರ್ಮ ವೇದಿಕೆಯಲ್ಲಿ ಸಮಾರಂಭವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಉದ್ಘಾಟಿಸಲಿದ್ದಾರೆ. ಶಾಸಕ ಸತೀಶ್ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿ, ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಭಾಗವಹಿಸಲಿದ್ದಾರೆ.

ಉದ್ಘಾಟನಾ ದಿನದಂದು ಕರ್ನಾಟಕ ಭೂಷಣ ಅದ್ವೈತ ಕುಡಾಳಕರ ಅವರಿಂದ ಗಾಂಧಾರ ವಿದ್ಯೆ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ. 12ರಂದು ಕಲ್ಪನಾ ರಶ್ಮಿ ಕಲಾಲೋಕ ತಂಡದಿಂದ ನೃತ್ಯ ರೂಪಕ, ಕೈಗಾ ತಂಡದಿಂದ ಅಂಬೇಡ್ಕರ್ ಅರಿವು ನಾಟಕ, ವೈಶಾಲಿ ತಂಡದಿಂದ ಮೆಲೋಡಿ ವೈಬ್ಸ್ ಹಾಗೂ ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಶಿವಾನಿ ತಂಡದಿಂದ ರಸಮಂಜರಿ ನಡೆಯಲಿದೆ. ಮೂರನೇ ದಿನ ಸ್ಟಾರ್ ಚಾಯ್ಸ್ ನೃತ್ಯ ರೂಪಕ ಹಾಗೂ ಸ್ಯಾಂಡಲ್‌ವುಡ್ ಗಾಯಕ ಶ್ರೀಹರ್ಷ ತಂಡದಿಂದ ಭರ್ಜರಿ ಮನರಂಜನೆ ಇರಲಿದೆ ಎಂದು ವಿವರಿಸಿದರು.

ಏ. 14ರಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಜಿಲ್ಲೆಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು. ಬಳಿಕ ನದಿರಾಬಾನು ಮತ್ತು ಪ್ರದೀಪ ಗುನಗಿ ತಂಡದಿಂದ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ.

ಟಾಗೋರ್ ಕಡಲತೀರದಲ್ಲಿ ಬೃಹತ್ ಅಮ್ಯೂಸ್‌ಮೆಂಟ್ ಪಾರ್ಕ್ ತಲೆ ಎತ್ತಲಿದೆ. ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಆಲೆಮನೆ, ಮಾವು ಮೇಳ ಹಾಗೂ ಹಲಸಿನ ಮೇಳವನ್ನು ಆಯೋಜಿಸುತ್ತಿರುವುದು ಮತ್ತೊಂದು ವಿಶೇಷ. ಇದರೊಂದಿಗೆ ಸ್ಥಳೀಯ ಬುಡಕಟ್ಟು ಮತ್ತು ಪರಿಶಿಷ್ಟ ಜನಾಂಗದವರು ತಯಾರಿಸಿದ ಗುಡಿ ಕೈಗಾರಿಕಾ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಪ್ರಮುಖರಾದ ದೇವಾನಂದ ಠಾಣೆಕರ, ಮಹಮದ್ ಅಬ್ಬಾಸ್, ಗಾರು ಮಾಂಗ್ರೆಕರ, ಹುಸೇನ್, ರಾಜನ್ ಬಾನಾವಳಿ, ರೋಹಿದಾಸ್ ಬಾನಾವಳಿ, ಸಚಿನ್ ಬೋರ್ಕರ್, ಪ್ರಶಾಂತ್ ಗಡ್ಕರ್, ರೋಹನ್ ಕುಡಾಲಕರ, ರಾಜೇಂದ್ರ ಮಾದರ, ಟೋನಿ ಏಲಕಪಾಟಿ, ಮಹಾಬಲೇಶ್ವರ ಮರಾಠೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಶ್ಚಿಮ ಘಟ್ಟ ರಕ್ಷಣೆ ಜನಾಂದೋಲನದಲ್ಲಿ ಭಾಗವಹಿಸಲು ಕರೆ
ಯಕ್ಷಗಾನದ ಪರಿಶುದ್ಧತೆ ಕಾಪಾಡಿದ ಹಿರಿಯ ಕಲಾವಿದರು: ಆರ್‌.ಟಿ. ಭಟ್ಟ ಕಬ್ಗಾಲ