ಕನ್ನಡಪ್ರಭ ವಾರ್ತೆ ವಿಜಯಪುರ
ಭಾರತ ಯಾವತ್ತು ಯಾರ ಮೇಲೂ ಯುದ್ಧ ಬಯಸುವ ದೇಶವಲ್ಲ. ಇತಿಹಾಸ ನೋಡಿದರೆ ಭಾರತ ಯಾವತ್ತೂ ಯಾರ ಮೇಲು ತಾನಾಗೆ ಯುದ್ಧಕ್ಕೆ ಮುಂದಾಗಿಲ್ಲ. ಆದರೆ, ಯಾರೇ ಯುದ್ಧ ಮಾಡಲು ಬಂದರು ದೇಶದ ಜನರು ಅತ್ಯಂತ ಸಮರ್ಥಕತೆಯಿಂದ ದೇಶದ ರಕ್ಷಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರ್ಗಿಲ್ ಯುದ್ಧವೇ ನಿದರ್ಶನ ಎಂದು ಬಿ.ಎಸ್.ಎಫ್ ಮಾಜಿ ಸೈನಿಕ, ಹವಾಲ್ದಾರ್ ದೇವೇಂದ್ರ ಜಾಧವ್ ಹೇಳಿದರು.ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ್ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಕಾರ್ಗಿಲ್ ವಿಜಯದಿನ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಗಿಲ್ ಪ್ರದೇಶವನ್ನು ಮರಳಿ ಭಾರತದ ವಶಕ್ಕೆ ಪಡೆದುಕೊಳ್ಳಬೇಕಾದರೇ ಸುಮಾರು 500ಕ್ಕೂ ಹೆಚ್ಚು ಯೋಧರು ವೀರ ಮರಣವನ್ನಪ್ಪಬೇಕಾಯಿತು. ಸಾವಿಗೆ ಎದೆಗುಂದದೆ ತಾಯಿ ಭಾರತಾಂಬೆ ರಕ್ಷಣೆಗೆ ನಿಂತ ಧೈರ್ಯವನ್ನು ಇಂದು ವಿಶ್ವದ ಅನೇಕ ರಾಷ್ಟ್ರಗಳು ಕೊಂಡಾಡುತ್ತಿವೆ ಎಂದರು.
ಮಾಜಿ ಸೈನಿಕ ಅಮೋಘಸಿದ್ಧ ಬಾಗೇವಾಡಿ ಮಾತನಾಡಿ, ಭಾರತದ ಮುಕುಟ ಪ್ರಾಯವಾದ ಕಾರ್ಗಿಲ್ ಪ್ರದೇಶವನ್ನು ನಮ್ಮ ಶತ್ರು ರಾಷ್ಟ್ರ ಆಕ್ರಮಿಸಬೇಕೆಂದು ಕಳೆದೆರಡು ದಶಕಗಳ ಹಿಂದೆ ನಡೆಸಿದ ಕುತಂತ್ರವನ್ನು ನಮ್ಮ ವೀರ ಯೋಧರು ವಿಫಲಗೊಳಿಸುವಲ್ಲಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ ಎಂದರು.ಮುಖ್ಯವಕ್ತಾರ ಮಂಜುನಾಥ ಜುನಗೊಂಡ ಮಾತನಾಡಿ, ಜನರು ದೇಶದ ಗಡಿಯ ಬಗ್ಗೆ ಆತಂಕಪಡಿವ ಅಗತ್ಯವೇ ಇಲ್ಲ. ದೇಶದ ಒಳಗೆ ಸರಿ ಇದ್ದರೇ ಗಡಿಯೂ ಭದ್ರವಾಗಿರುತ್ತದೆ. ಗಡಿಯನ್ನು ನಿಭಾಯಿಸಲು ನಮ್ಮ ಸೇನೆ ಸಮರ್ಥವಾಗಿದೆ. ಜಾತಿ, ಮತ ಹಾಗೂ ಧರ್ಮಗಳ ವಿಚಾರದಲ್ಲಿ ಕಚ್ಚಾಡದೇ, ಎಲ್ಲರೂ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಹಾಗೂ ಕಾನೂನಿಗೆ ಗೌರವಕೊಟ್ಟು ಬದುಕಿದರೇ ಭಾರತವನ್ನು ಮಣಿಸಲು ಯಾರಿಗೂ ಸಾಧ್ಯವಿಲ್ಲ ಎಂದರು.ಎಬಿವಿಪಿ ಉತ್ತರ ಪ್ರಾಂತ ಕಾರ್ಯದರ್ಶಿ ಸಚಿನ ಕೊಳಗೇರಿ ಮಾತನಾಡಿ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ಮಾಡುವ ದೇಶದ ವೀರ ಯೋಧರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಮತ್ತು ಭಾರತದ ಹೆಮ್ಮೆಯ ಪುತ್ರರಾದ ಸೈನಿಕರನ್ನು ಗೌರವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಭಾರತ ಮಾತೆಯ ಮಡಿಲಿಗೆ ಸೇವೆ ಸಲ್ಲಿಸಿದ ಯೋಧರಿಗೆ ಸನ್ಮಾನಿಸಲಾಯಿತು. ಪ್ರಾಚಾರ್ಯ ಜಿ.ಎಚ್.ಮಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ವಿಕಾಸ ದರಬಾರ ಅಧ್ಯಕ್ಷತೆ ಸ್ಥಾನ ವಹಿಸಿದ್ದರು. ಎಬಿವಿಪಿ ಪ್ರಮುಖ ಪ್ರವೀಣ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸ್ವರ್ಣಮಾ ಗುಡೂರ ವಂದಿಸಿದರು. ಉಪನ್ಯಾಸಕ ಸುಭಾಷ್ ಪಾಟೀಲ್ ಸ್ವಾಗತಿಸಿದರು.ಸಾಂಸ್ಕೃತಿಕ ಕಾರ್ಯದರ್ಶಿ ಎಂ.ಎಚ್.ಕೋಟ್ಯಾಳ, ಮಹಾವಿದ್ಯಾಲಯದ ಭೋದಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.