ಅಣ್ಣೂರು ಸತೀಶ್
ಕನ್ನಡಪ್ರಭ ವಾರ್ತೆ ಭಾರತೀನಗರಐತಿಹಾಸಿಕ ಹಿನ್ನೆಲೆ ಹೊಂದಿರುವ ಕಾರ್ಕಹಳ್ಳಿ ಶ್ರೀಬಸವೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಮಾ.27ರಂದು ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಪುರಾತನ ಕಾಲದಿಂದಲೂ ಆಚರಿಸುವ ಜಾತ್ರಾ ಮಹೋತ್ಸವಕ್ಕೆ ಹಲವು ವರ್ಷಗಳಿಂದ ಎರಡು ಗುಂಪುಗಳ ನಡುವೇ ಬಿನ್ನಾಭಿಪ್ರಾಯ ಉಂಟಾಗಿತ್ತು. ಹಬ್ಬ ಆಚರಿಸಲು ತಾಲೂಕು ಆಡಳಿತದಿಂದ ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಿದಾಗ 2 ಗುಂಪುಗಳ ಮುಖಂಡರು ಒಪ್ಪಿಗೆ ಸೂಚಿಸಿದ ಮೇರೆಗೆ ಹಬ್ಬ ಆಚರಣೆಗೆ ಮುಂದಾಗಿ ಪೂಜಾ ವಿಧಿವಿಧಾನಗಳಿಗೆ ಹಣಿಯಾಗಿದೆ.ಜಾತ್ರಾ ಮಹೋತ್ಸವದ ಅಂಗವಾಗಿ ಬಸವೇಶ್ವರ ದೇವಸ್ಥಾನವನ್ನು ಹೂಗಳಿಂದ ಶೃಂಗಾರಗೊಳಿಸಲಾಗಿದೆ. ಸ್ಥಳೀಯ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಜಾತ್ರೆ ಹಾಗೂ ರಥೋತ್ಸವಕ್ಕೆ ಆಗಮಿಸಲಿದ್ದಾರೆ. ಶ್ರೀ ಕಾಲಭೈರವೇಶ್ವರ ಬಸವ, ಚಿಕ್ಕರಸಿನಕೆರೆ ಬಸವಗಳ ಜೋಡಿ ಜಾತ್ರೆಯಲ್ಲಿ ಜೊತೆಗೂಡಿ ಭಕ್ತಾದಿಗಳಲ್ಲಿ ಹರ್ಷ ಉಂಟುಮಾಡುವುದರ ಜೊತೆಗೆ ಮೆರಗು ತರಲಿದೆ.
ಜಾತ್ರೆ ಅಂಗವಾಗಿ ಮಂಗಳವಾರ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ನಡೆಯಿತು. ಮಾ.28ರಂದು ದೇವೇಗೌಡನದೊಡ್ಡಿ ಗ್ರಾಮದಲ್ಲಿ ಕಾರ್ಕಹಳ್ಳಿ ಶ್ರೀಬಸವೇಶ್ವರ ಉತ್ಸವ, ಮಾ.29 ರಂದು ಮುತ್ತುರಾಯಸ್ವಾಮಿಯ ಸೇವೆ ಮತ್ತು ಅನ್ನಸಂತರ್ಪಣೆ ಜರುಗಲಿದೆ.ಜಾತ್ರೆ ಅಂಗವಾಗಿ ಹಬ್ಬಕ್ಕೆ ಮೂರುದಿನ ಮುಂಚಿತವಾಗಿ 15 ದಿನಗಳವರೆಗೆ ಪ್ರಾಣಿ ಬಲಿ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ. ಜಾತ್ರೆಗೆ ಬರುವ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ, ಸಾರ್ವಜನಿಕರಿಗೆ ಮೂಲ ಸೌಕರ್ಯಗಳು, ವಾಹನ ನಿಲುಗಡೆಗೆ ಸ್ಥಳಾವಕಾಶ ಹಾಗೂ ನೀರಿನ ಸೌಲಭ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.ಕಾರ್ಕಹಳ್ಳಿ ಬಸವೇಶ್ವರ ಜಾತ್ರಾಮಹೋತ್ಸವ ಅಚ್ಚುಕಟ್ಟಾಗಿ ನಡೆಸಲು ತಾಲೂಕು ಆಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ. ಬಸವೇಶ್ವರಸ್ವಾಮಿ ನಮ್ಮ ಮನೆದೇವರಾಗಿದೆ. ಇದರ ಅಭಿವೃದ್ದಿಗೆ ನನ್ನೊಂದಿಗೆ ಗ್ರಾಮದ ಯಜಮಾನರು ಸಹ ಕೈ ಜೋಡಿಸುತ್ತಿದ್ದಾರೆ.
- ಮಧು ಜಿ.ಮಾದೇಗೌಡ, ಶಾಸಕರು.ಕಾರ್ಕಹಳ್ಳಿ ಬಸವೇಶ್ವರ ದೇಗುಲದ ಬಸವ ಭ್ರಷ್ಟಾಚಾರಿಗಳಿಗೆ, ಕಳ್ಳಕಾಕರಿಗೆ, ಜಮೀನು ಒತ್ತುವರಿ ದಾರರಿಗೆ ಸಿಂಹಸ್ವಪ್ನವಾಗಿದೆ. ದೇವಸ್ಥಾನದ ಜಮೀನು ಹಾಗೂ ಇತ್ಯಾದಿ ಜಮೀನುಗಳ ಒತ್ತುವರಿಯನ್ನು ಬಿಡಿಸುವಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಮುಂದುವರೆಸಿದೆ. ಬಸವ ರಾಜ್ಯಾಧ್ಯಂತ ತನ್ನ ಭಕ್ತರನ್ನು ಹೊಂದಿದೆ.- ಕಾರ್ಕಹಳ್ಳಿ ಸ್ವರೂಪ್ಚಂದ್ರ, ಗ್ರಾಮದ ಮುಖಂಡ