ಕಾರ್ಕಳ: ಕ್ರಿಯೆಟಿವ್ ಶಿಕ್ಷಣ ಸಂಸ್ಥೆಗಳು ಸೃಜನಾತ್ಮಕ ಚಟುವಟಿಕೆಗಳಿಗೆ ಹೊಸ ರೂಪ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.ಕಾರ್ಕಳದ ಹಿರ್ಗಾನದಲ್ಲಿರುವ ಮಾವಿನಕಟ್ಟೆಯ ಪಿಂಟೋ ಅವೆನ್ಯೂನಲ್ಲಿ ಸ್ಥಾಪಿಸಲಾದ ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ, ಬಳಿಕ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯ ಕ್ರಷರ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಮೂಲಕ ಧಾರ್ಮಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದರು.ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರ್ಗಾನ ಸಂತೋಷ್ ಶೆಟ್ಟಿ ಮಾತನಾಡಿದರು.ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಸ್ವಾಗತಿಸಿ, ಕ್ರಿಯೇಟಿವ್ ಸಂಸ್ಥೆ 642 ಜನರಿಗೆ ಉದ್ಯೋಗ ಒದಗಿಸಿದೆ. ಬಂಡವಾಳ ಸಂಗ್ರಹಿಸಿ ಸೇವೆ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಸುಮಾರು 5 ಕೋಟಿ ರು.ಗಳನ್ನು ಉಚಿತ ಶಿಕ್ಷಣಕ್ಕೆ ವಿನಿಯೋಗಿಸಿದ್ದು, ಪುಸ್ತಕ ಮನೆ ಮೂಲಕ ಲಕ್ಷಾಂತರ ಪ್ರಕಟಣೆಗಳನ್ನು ವಿತರಿಸಲಾಗಿದೆ. ಸಿಇಟಿ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಸರ್ಕಾರಿ ಕಾಲೇಜುಗಳಿಗೆ ನೀಡಲಾಗುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಆದರ್ಶ ಎಂ.ಕೆ. ಮಾತನಾಡಿ, ಗ್ರಾಮದಲ್ಲಿ ಸಹಕಾರವೇ ಮುಖ್ಯ, ಸಹಕಾರದಿಂದ ಬದುಕೋಣ ಎಂದರು.
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ ಶುಭಾಶಯ ಕೋರಿದರು.ಉಪಾಧ್ಯಕ್ಷರಾದ ಅಶ್ವತ್ ಎಸ್.ಎಲ್., ವಿಮಲ್ ರಾಜ್, ಅಮೃತ್ ರೈ, ವಿದ್ವಾನ್ ಗಣಪತಿ ಭಟ್, ರವಿ ಹೆಗಡೆ, ಆಶಾ ಕೆ.ಎಲ್, ಗಣಪತಿ ಭಟ್., ಸುನೀಲ್ ಶೆಟ್ಟಿ, ಅಕ್ಷತಾ, ರಶ್ಮಿ, ಹರೀಶ್ ಮತ್ತಿತರರಿದ್ದರು.