ಕಾರ್ಕಳ: ಕಾರ್ಕಳದ ಸರ್ಕಾರಿ ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಲೇಜಿಗೆ ಇಂದಿಗೂ ಸ್ವಂತ ಕಟ್ಟಡವಿಲ್ಲದೆ, ಅಗತ್ಯವಿರುವಷ್ಟು ಉಪನ್ಯಾಸಕರು ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಸರ್ಕಾರಿ ತಾಲೂಕು ಆಸ್ಪತ್ರೆ ಬಳಿಯಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ಬಸ್ ನಿಲ್ದಾಣ, ವೆಂಕಟರಮಣ ದೇವಸ್ಥಾನ, ಸಾಲ್ಮರ ಮತ್ತು ಬಂಡಿಮಠದ ಮೂಲಕ ಸಾಗಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ‘ಸ್ವಂತ ಕಟ್ಟಡ ಬೇಕು’, ‘ಉಪನ್ಯಾಸಕರ ನೇಮಕ ಮಾಡಬೇಕು’, ‘ಐಎನ್ಸಿ ಮಾನ್ಯತೆ ದೊರಕಬೇಕು’ ಎಂದು ಘೋಷಣೆ ಕೂಗಿದರು.
ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ್ಯ ರಾಜ್ಯ ಸಹ ಸಂಚಾಲಕ ಗಣೇಶ್ ಪೂಜಾರಿ, ಜಿಲ್ಲಾ ಸಂಚಾಲಕ ಶ್ರೇಯಸ್ ಅಂಚನ್, ತಾಲೂಕು ಸಂಚಾಲಕ ಸುಶಾನ್ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.