ಕಾರ್ಕಳ: ನಾಯಕತ್ವ ಬೆಳೆಸಿಕೊಳ್ಳುವಾಗ ನಮ್ಮ ಹಿಂದೆ ಇತರರೂ ಬೆಳೆಯಬೇಕು ಅನ್ನುವ ಗುಣ ಇರಬೇಕು. ಅಂಕಗಳೊಂದಿಗೆ ಜೀವನ ಪಾಠವನ್ನೂ ಕಲಿಯುವುದು ಮುಖ್ಯ. ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ವಿದ್ಯಾರ್ಥಿಗಳು ತಮ್ಮಿಂದಾದ ಕೊಡುಗೆ ನೀಡಬೇಕು. ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ಮೋಹನ ಪಡಿವಾಳ ಹೇಳಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ನನ್ನ ವಿದ್ಯಾರ್ಥಿ ದೆಸೆಯನ್ನು ಇದೇ ಕಾಲೇಜಿನಲ್ಲಿ ಕಳೆದಿದ್ದೇನೆ. ಸಂಸ್ಥೆಯನ್ನು ಯಾವತ್ತೂ ವಿದ್ಯಾರ್ಥಿಗಳು ಮರೆಯಬಾರದು. ವಿದ್ಯಾರ್ಥಿಗಳ ಜೊತೆ ಸೇರುವುದೇ ನನಗೆ ಸಂತೋಷವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿಎ ಶಿವಾನಂದ ಪೈ ಅವರು, ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಮುಂದುವರಿಯಬೇಕು. ಇದು ಬದುಕಿಗೆ ದೊರೆತ ಸುವರ್ಣಾವಕಾಶ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ಅವಕಾಶವನ್ನು ಹಂಚಿಕೊಳ್ಳುವ ಮನೋಭಾವ ಬೆಳೆಸಿದಾಗ ಬದುಕಿನಲ್ಲಿ ಮುಂದೆ ಬರಲು ಸಾಧ್ಯ. ಒಬ್ಬ ವಿದ್ಯಾರ್ಥಿಯ ಭವಿಷ್ಯ ಕೇವಲ ಪುಸ್ತಕಗಳಿಂದ ಮಾತ್ರ ರೂಪುಗೊಳ್ಳುವುದಿಲ್ಲ ಎಂದರು.ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್ ಪ್ರತಿಜ್ಞಾ ವಿಧಿ ನೆರವೇರಿಸಿದರು.