ಉನ್ನತ ಶಿಕ್ಷಣ ಕೌನ್ಸಿಲ್‌ ಸಭೆಯಲ್ಲಿ ಕವಿವಿ ಸಮಸ್ಯೆ ಅನಾವರಣ

KannadaprabhaNewsNetwork |  
Published : Sep 04, 2026, 02:30 AM IST
ಕುಲಪತಿ ಡಾ. ಎ.ಎಂ. ಖಾನ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕವಿವಿ ಹಳೆಯ ವಿದ್ಯಾರ್ಥಿಯಾಗಿರುವ ಬಸವರಾಜ ರಾಯರೆಡ್ಡಿ ಈ ಮೊದಲು ಉನ್ನತ ಶಿಕ್ಷಣ ಸಚಿವರಾಗಿದ್ದಾಗಲೂ ವಿವಿ ಬೆಳೆವಣಿಗೆ ವಿಶೇಷ ಆಸಕ್ತಿ ವಹಿಸಿದ್ದರು. ಈ ಬಾರಿಯೂ ಅದೇ ರೀತಿ ವಿವಿ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ.

ಧಾರವಾಡ:

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಒಳಗೊಂಡು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸೆ. 11ರಂದು ಉನ್ನತ ಶಿಕ್ಷಣ ಕೌನ್ಸಿಲ್‌ ಸಭೆ ನಡೆಯಲಿದ್ದು, ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹಲವು ಮೂಲಗಳಿಂದ ಬರಬೇಕಾದ ಅನುದಾನ, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಕುಲಪತಿ ಡಾ. ಎ.ಎಂ. ಖಾನ್‌ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಅಇದ ಅವರು, ಕವಿವಿ ಹಳೆಯ ವಿದ್ಯಾರ್ಥಿಯಾಗಿರುವ ಬಸವರಾಜ ರಾಯರೆಡ್ಡಿ ಈ ಮೊದಲು ಉನ್ನತ ಶಿಕ್ಷಣ ಸಚಿವರಾಗಿದ್ದಾಗಲೂ ವಿವಿ ಬೆಳೆವಣಿಗೆ ವಿಶೇಷ ಆಸಕ್ತಿ ವಹಿಸಿದ್ದರು. ಈ ಬಾರಿಯೂ ಅದೇ ರೀತಿ ವಿವಿ ಅಭಿವೃದ್ಧಿಗೆ ಸಹಕಾರ ನೀಡುತ್ತಾರೆ ಎಂಬ ಭರವಸೆ ಹಿನ್ನೆಲೆಯಲ್ಲಿ ವಿವಿ ಸಮಸ್ಯೆಗಳನ್ನು ಸೆ. 11ರಂದು ನಡೆಯಲಿರುವ ಸಭೆಯಲ್ಲಿ ಅವರ ಎದುರು ಪ್ರಸ್ತುತಪಡಿಸಲು ನಾವು ಸಿದ್ಧವಾಗಿದ್ದೇವೆ ಎಂದರು.

ಹಳೆಯ ವಿವಿಯಾಗಿರುವ ಕಾರಣ ಪಿಂಚಣಿ ಹಣದ ಸಮಸ್ಯೆ ದೊಡ್ಡದು. ಕಳೆದ ವರ್ಷ ₹ 126 ಕೋಟಿ ಪೈಕಿ ₹ 86 ಕೋಟಿ ಸರ್ಕಾರದಿಂದ ಬಂದಿದ್ದು, ಉಳಿದ ₹ 46 ಕೋಟಿಯನ್ನು ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಈ ವರ್ಷ ₹ 131 ಕೋಟಿ ಪೈಕಿ ಬರೀ₹ 67.5 ಕೋಟಿ ಮಾತ್ರ ಬಂದಿದೆ. ಆದರೆ, ಮೈಸೂರು ವಿವಿಗೆ ₹ 100 ಕೋಟಿ ನೀಡಿರುವ ಹಿನ್ನೆಲೆಯಲ್ಲಿ ಉಳಿದ ಅನುದಾನ ಕೊಡುವ ಭರವಸೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ, ಕವಿವಿಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕೆಲವು ಅಭಿವೃದ್ಧಿ ಕಾರ್ಯ ಮಾಡಲು ಸರ್ಕಾರಕ್ಕೆ ಅನುದಾನದ ಬೇಡಿಕೆ ಇಡಲಾಗಿದೆ. ಕವಿವಿ ರಾಣಿಚೆನ್ನಮ್ಮ ಕ್ರೀಡಾಂಣದ ಅಭಿವೃದ್ಧಿ, ಹಾಕಿ ಮೈದಾನ, ಮೊದಲಿದ್ದ ಈಜುಗೊಳ ಅಭಿವೃದ್ಧಿಗಾಗಿ ₹ 30 ಕೋಟಿ ಅನುದಾನದ ಬೇಡಿಕೆ ಇಡಲಾಗಿದೆ. ವಿದ್ಯಾಸೌಧದ ದುರಸ್ತಿಗೆ ₹ 5 ಕೋಟಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು ಗ್ರಂಥಾಲಯದಲ್ಲಿ ತಂತ್ರಜ್ಞಾನ ಅಳವಡಿಕೆಗೆ ₹ 2 ಕೋಟಿ ಅನುದಾನದ ಬೇಡಿಕೆ ಇಡಲಾಗಿದೆ. ಇದರೊಂದಿಗೆ ಪ್ರಮುಖವಾಗಿ ಎಲ್ಲ ವಿಭಾಗಗಳಲ್ಲಿ ನಿವೃತ್ತಿಯಾದ ಬೋಧಕ-ಬೋಧಕೇತರ ಹುದ್ದೆ ತುಂಬಿಲ್ಲ. ಖಾಲಿ ಇರುವ 420 ಹುದ್ದೆಗಳ ಪೈಕಿ 258 ಹುದ್ದೆ ಭರ್ತಿ ಮಾಡಿಕೊಳ್ಳಲು ಕೇಳಿದ್ದೇವೆ ಎಂದು ತಿಳಿಸಿದರು.

ಕವಿವಿ ಹಳೆಯ ದಾಖಲೆ ಪ್ರಕಾರ 888 ಎಕರೆ ಜಮೀನಿದ್ದು, ಒತ್ತುವರಿ ಆಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅಳತೆ ಮಾಡಿಸಲಾಗುತ್ತಿದೆ. ಭೂಮಾನಪ ಇಲಾಖೆ ನಿವೃತ್ತ ಅಧಿಕಾರಿ ಸಹಕಾರದೊಂದಿದೆ ದಾಖಲೆ ಸಂಗ್ರಹಿಸುತ್ತಿದ್ದು, ಶೀಘ್ರ ಸರ್ವೇ ಕಾರ್ಯ ಮಾಡಲಾಗುವುದು ಎಂದು ಖಾನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ವಿಶ್ವನಾಥ ಎಂ., ಮೌಲ್ಯಮಾಪನ ಕುಲಸಚಿವ ಪ್ರೊ. ಎ.ಎಂ. ಕಡಕೋಳ ಹಾಗೂ ಪ್ರಸಾರಂಗ ನಿರ್ದೇಶಕ ಪ್ರೊ.ಜೆ.ಎಂ. ಚಂದುನವರ ಇದ್ದರು. ನಾಳೆ ಶಿಕ್ಷಕರ ದಿನಾಚರಣೆ, ಉಪನ್ಯಾಸ, ಸನ್ಮಾನ

ಕವಿವಿಯಲ್ಲಿ ಸೆ. 5ರಂದು ಬೆಳಗ್ಗೆ 11ಕ್ಕೆ ಸಿನೆಟ್‌ ಭವನದಲ್ಲಿ ಶಿಕ್ಷಣ ತಜ್ಞರ ಹಾಗೂ ಶಿಕ್ಷಕರ ದಿನಾಚರಣೆ ನಿಮಿತ್ತ ಪದ್ಮಭೂಷಣ ಡಾ. ಡಿ.ಸಿ. ಪಾವಟೆ ಸ್ಮಾರಕ ಮೂಲತತ್ವ ಉಪನ್ಯಾಸ, ಕೃತಿ ಬಿಡುಗಡೆ ಆಯೋಜಿಸಿದೆ. ಅತಿಥಿಗಳಾಗಿ ಗೋಕಾಕನ ಜೆಎಸ್‌ಎಸ್‌ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಆರ್.ಎಚ್‌. ಗುಣಕಿ ಆಗಮಿಸುವರು. ಡಾ. ಡಿ.ಸಿ. ಪಾವಟೆ ಉಪನ್ಯಾಸದ ಅಂಗವಾಗಿ ಶಿಕ್ಷಣದಾಚೆ ಪರಿಪೂರ್ಣ ಮತ್ತು ಆರೋಗ್ಯಕರ ಜೀವನದೆಡೆಗೆ ಕುರಿತು ಭಾರತೀಯ ಪ್ರಸಿದ್ಧ ಮೂಳೆ ಶಸ್ತ್ರಚಿಕಿತ್ಸಕ ಡಾ. ಜಾನ್ ಎಬ್ನೆಜರ್‌ ಉಪನ್ಯಾಸ ನೀಡುವರು. ಇದೇ ವೇಳೆ ಡಾ. ಡಿ.ಸಿ.ಪಾವಟೆ ಆಜ್‌ ಆನ್‌ ಅಡ್ಮಿನಿಸ್ಟ್ರೇಟರ್‌ ಎಂಬ ಕೃತಿ ಬಿಡುಗಡೆಯೂ ನಡೆಯಲಿದೆ. ಅಲ್ಲದೇ, ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ 13 ಜನರ ಕವಿವಿ ಶಿಕ್ಷಕರಿಗೆ ಸನ್ಮಾನ ಸಹ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ್ಗಕ್ಕೆ ಗ್ಯಾರಂಟಿ ಯೋಜನೆ ವರದಾನ: ಪಿ.ಟಿ. ಪರಮೇಶ್ವರ ನಾಯ್ಕ
ಬಿಜೆಪಿ ಪಾದಯಾತ್ರೆ ಇಂದು ಕಾರಟಗಿ ಪ್ರವೇಶ