ಕರ್ನಾಟಕ ಉಗ್ರರ ಸ್ವರ್ಗವಾಗುತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ

KannadaprabhaNewsNetwork |  
Published : Mar 03, 2024, 01:31 AM IST
ಪ್ರಹ್ಲಾದ ಜೋಶಿ. | Kannada Prabha

ಸಾರಾಂಶ

ಕಾಂಗ್ರೆಸ್ ಆಡಳಿತ ಇರುವುದರಿಂದ ಭಯೋತ್ಪಾದಕರಿಗೆ, ಉಗ್ರರಿಗೆ ದಾಳಿ ನಡೆಸಲು ಇಂದು ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಕೇವಲ ವೋಟ್ ಬ್ಯಾಂಕ್ ಗಾಗಿ ಕರ್ನಾಟಕವನ್ನು ಉಗ್ರರ ತಾಣ ಮಾಡಬೇಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಂದು ಕರ್ನಾಟಕ ಉಗ್ರರ ಸ್ವರ್ಗವಾಗುತ್ತಿದೆ. ಕಾಂಗ್ರೆಸ್‌ ಸರ್ಕಾರದ ಈ ಆಡಳಿತದಲ್ಲಿ ಮೂಲಭೂತವಾದಿಗಳು ಮತ್ತು ಉಗ್ರ ಚಟುವಟಿಕೆಗಳಿಗೆ ಕರ್ನಾಟಕ ಪ್ರಮುಖ ಸ್ಥಾನವಾಗಿ ಮಾರ್ಪಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಸ್ಫೋಟಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ನೇರ ಹೊಣೆಗಾರರು. ದೇಶದಲ್ಲಿ ಶೇ. 90ರಷ್ಟು ಉಗ್ರ ಚಟುವಟಿಕೆ ನಿಗ್ರಹವಾಗಿದೆ. ಆದರೆ, ಈಗ ತಮಗೆ ಬೆಂಬಲ ಸಿಗಬಹುದಾದಂತಹ ರಾಜ್ಯಗಳಲ್ಲಿ ಮತ್ತೆ ತಲೆ ಎತ್ತುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಉಗ್ರರ ತಾಣವಾಗಿಸಬೇಡಿ

ಕಾಂಗ್ರೆಸ್ ಆಡಳಿತ ಇರುವುದರಿಂದ ಭಯೋತ್ಪಾದಕರಿಗೆ, ಉಗ್ರರಿಗೆ ದಾಳಿ ನಡೆಸಲು ಇಂದು ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಕೇವಲ ವೋಟ್ ಬ್ಯಾಂಕ್ ಗಾಗಿ ಕರ್ನಾಟಕವನ್ನು ಉಗ್ರರ ತಾಣ ಮಾಡಬೇಡಿ. ಮೊದಲು ಮುಖ್ಯಮಂತ್ರಿಗಳು ಇದನ್ನು ನಿಲ್ಲಿಸಿ. ಈ ಎರಡೂ ಘಟನೆ ರಾಜ್ಯದಲ್ಲಿ ಆಡಳಿತ ಮತ್ತು ಆಂತರಿಕ ಭದ್ರತೆ ವೈಫಲ್ಯಕ್ಕೆ ನಿದರ್ಶನ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಸ್ಫೋಟ ಎರಡೂ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಎನ್‌ಐಎ ತನಿಖೆಗೆ ವಹಿಸಬೇಕು ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಎಸ್.ಎಫ್.ಎಲ್. ವರದಿಯಲ್ಲಿ ದೃಢಪಟ್ಟಿದೆ. ಹಾಗಿದ್ದರೂ ಕ್ರಮ ಕೈಗೊಂಡಿಲ್ಲ ಏಕೆ? ಸಾಲದ್ದಕ್ಕೆ ಮತ್ತಷ್ಟು ವಿಡಿಯೋ ಕಳಿಸಿ ತೀರ್ಮಾನಿಸುತ್ತೇವೆ ಎಂದಿದ್ದೀರಿ. ಅಪರಾಧಿಗಳನ್ನು ಇನ್ನೂ ಎಷ್ಟು ರಕ್ಷಿಸಿಕೊಳ್ಳುತ್ತೀರಿ? ಎಂದು ಜೋಶಿ ತರಾಟೆಗೆ ತೆಗೆದುಕೊಂಡರು.

ಕಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಪರಿಣಾಮ ರಾಜ್ಯದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ಇದಕ್ಕೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು.

ಇಂತಹವರಿಗೆ ಬೆಂಬಲ ನೀಡಬೇಕೆ?

ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ದೇಶವನ್ನು ಅಭದ್ರ ಮಾಡುತ್ತಿದೆ. ಇಂತಹ ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಎಂದು ಪ್ರಶ್ನಿಸಿದ ಜೋಶಿ, ಇದು ಅತ್ಯಂತ ಅಯೋಗ್ಯ ಸರ್ಕಾರ. ಈ ರೀತಿಯ ಚಿಲ್ಲರೆ, ತುಷ್ಟೀಕರಣದ ರಾಜಕೀಯ ನಿಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ