ಹರಪನಹಳ್ಳಿ: ಒಂದು ಕಾಲದಲ್ಲಿ ಬಿಹಾರ ಭ್ರಷ್ಟಾಚಾರದ ಹೆಡ್ ಕ್ವಾರ್ಟರ್ಸ್ ಆಗಿತ್ತು. ಈಗ ಕರ್ನಾಟಕ ಭ್ರಷ್ಟಾಚಾರದ ಮುಖ್ಯ ಕೇಂದ್ರ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹ:
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರ ಕೂಡಲೇ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯಬೇಕು ಎಂದು ಅವರು ಒತ್ತಾಯಿಸಿದರು.ತುಂಗಭದ್ರಾ ಕ್ರಸ್ಟ್ಗೇಟ್ಗಳನ್ನು ದುರಸ್ತಿ ಮಾಡಿಸಲು ಆಗದಷ್ಟು ದುಸ್ಥಿತಿ ಈ ಸರ್ಕಾರಕ್ಕೆ ಬಂದಿದೆ. ಕಮಿಷನ್ಗೆ ಹೆದರಿ ಗುತ್ತಿಗೆದಾರರು ಕ್ರಸ್ಟ್ಗೇಟ್ ಅಳವಡಿಸಲು ಬರುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸಂಖ್ಯಾಬಲವಿದೆ. ಆದರೆ ಜನರ ವಿಶ್ವಾಸ ಕಳೆದುಕೊಂಡಿದೆ. ಮಧ್ಯಂತರ ಚುನಾವಣೆ ಸಾಧ್ಯತೆ ಕಂಡು ಬರುತ್ತಾ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಹೈಕಮಾಂಡ್ ದುರ್ಬಲವಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿದರೂ ಒಳ್ಳೆಯ ಆಡಳಿತ ಕೊಡುವ ಅವಕಾಶ ಕಳೆದುಕೊಂಡಿದೆ. ಗುಂಡಿಯೊಳಗೆ ರಸ್ತೆಗಳಿವೆ, ದೇಶದಲ್ಲಿಯೇ ರೈತರ ಆತ್ಮಹತ್ಯೆ ಕರ್ನಾಟಕದಲ್ಲಿ 2ನೇ ಸ್ಥಾನವಿದೆ. ನೌಕರರ ಆತ್ಮಹತ್ಯೆಗೆ 1ನೇ ಸ್ಥಾನದಲ್ಲಿದೆ ಎಂದು ಹೇಳಿದರು.ಆರ್ಎಸ್ಎಸ್ ಚಟುವಟಿಕೆ ನಿಷೇಧ ಕುರಿತು ಮಾತನಾಡಿದ ಅವರು, ಆರ್ಎಸ್ಎಸ್ ಜನರ ಹೃದಯದಲ್ಲಿ ಬೇರು ಬಿಟ್ಟಿದೆ. ಹಿಂದೂ ಸಮಾಜವನ್ನು ರಾಷ್ಟ್ರವ್ಯಾಪಿ ಒಗ್ಗೂಡಿಸಿದೆ ಎಂದು ಹೇಳಿದರು.
ಬಿಹಾರ್ ರಾಜ್ಯದಲ್ಲಿ ನೀತಿ, ನಿಯತ್ತಿನ ಅಂಶಗಳಿಗೆ ಜನರು ಮನ್ನಣೆ ನೀಡಿದ್ದಾರೆ. ದೇಶ ಮೊದಲು ಎಂಬ ನೀತಿ, ಮೋದಿ, ನಿತೀಶ ಅವರ ಬಗ್ಗೆ ವಿಶ್ವಾಸ, ಬಿಹಾರ, ರಾಷ್ಟ್ರಕ್ಕೆ ಇರುವ ನಿಷ್ಠೆ ಹೀಗೆ ಮೂರು ಅಂಶಗಳನ್ನು ನೋಡಿ ಅಲ್ಲಿಯ ಜನತೆ ಮತ ಹಾಕಿದ್ದಾರೆ ಎಂದು ಹೇಳಿದರು.ಒಡೆದು ಆಳುವ ರಾಜಕಾರಣ, ಗುಂಡಾಗಿರಿ ನೇತೃತ್ವ ನಮಗೆ ಬೇಡ ಎಂದು ಬಿಹಾರ ಜನತೆ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಇನ್ನಾದರೂ ತನ್ನ ನೀತಿ ಬದಲಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಇಂದು ಕರ್ನಾಟಕದಲ್ಲಿ ಚುನಾವಣೆ ಆದರೂ ಬಿಹಾರ ಮಾದರಿ ಫಲಿತಾಂಶ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ದಾಖಲೆಯತ್ತ ಸಾಗಿದೆ. 95 ವಿವಿಧ ಚುನಾವಣೆಗಳಲ್ಲಿ ಸೋಲಾಗಿದೆ. ಶೀಘ್ರ ಸೋಲಿನ ಶತಕ ವೀರ ರಾಹುಲ್ ಗಾಂಧಿ ಆಗುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶೇಖರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ, ಮಾಜಿ ಅಧ್ಯಕ್ಷ ಚೆನ್ನಬಸವನಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಮುಖಂಡರಾದ ಆರುಂಡಿ ನಾಗರಾಜ, ಜಿ. ನಂಜನಗೌಡ, ಆರ್. ಲೋಕೇಶ, ಮುತ್ತಿಗೆ ವಾಗೀಶ, ಬಾಗಳಿ ಕೊಟ್ರೇಶಪ್ಪ, ಕಡೇಮನಿ ಸಂಗಮೇಶ ಉದಯಕುಮಾರ, ವೆಂಕಟೇಶ ನಾಯ್ಕ, ಓಂಕಾರಗೌಡ, ಮಲ್ಲೇಶ, ಬಂಡ್ರಿ ರವಿ, ಚಿಕ್ಕಳ್ಳಿ ದೇವರಾಜ, ಗುಳುಗಿ ತಿಮ್ಮಣ್ಣ ಇದ್ದರು.