ಕರ್ನಾಟಕ ವೈವಿಧ್ಯಮಯ ಕಲೆಗಳ ತವರೂರು: ಮುನಿರಾಜು

KannadaprabhaNewsNetwork |  
Published : Mar 06, 2025, 12:35 AM IST
ಬಳ್ಳಾರಿ ವಿವಿಯಲ್ಲಿ ಜರುಗಿದ 5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಶೈಕ್ಷಣಿಕ ರಂಗದಲ್ಲಿ ರಾಜ್ಯದೆಲ್ಲೆಡೆ ಇರುವ ವೈವಿಧ್ಯಮಯ, ಸಾಂಸ್ಕೃತಿಕ ಕಲೆಗಳು ಯುವ ಸಮುದಾಯಕ್ಕೆ ವಿನಿಮಯವಾಗಬೇಕು.

5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟನೆ । ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಶೈಕ್ಷಣಿಕ ರಂಗದಲ್ಲಿ ರಾಜ್ಯದೆಲ್ಲೆಡೆ ಇರುವ ವೈವಿಧ್ಯಮಯ, ಸಾಂಸ್ಕೃತಿಕ ಕಲೆಗಳು ಯುವ ಸಮುದಾಯಕ್ಕೆ ವಿನಿಮಯವಾಗಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಮುನಿರಾಜು ಅವರು ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಸಭಾಂಗಣದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೈ ಭಾರತ್- ನೆಹರು ಯುವ ಕೇಂದ್ರ, ಬಳ್ಳಾರಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಡೆಯಲಿರುವ 5 ದಿನಗಳ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯವು ಹಲವಾರು ವೈವಿಧ್ಯಮಯ ಕಲೆಗಳ ತವರೂರಾಗಿದೆ. ನಮ್ಮಲ್ಲಿ ಪ್ರದೇಶವಾರು ವಿಭಿನ್ನ ಸಾಂಸ್ಕೃತಿಕ ಪರಂಪರೆಗಳನ್ನು ಕಾಣಬಹುದಾಗಿದ್ದು, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ವರದಾನವಾಗಿವೆ ಎಂದರು.

ದೇಶವು 2047ರ ಹೊತ್ತಿಗೆ ಶೇ.80 ಯುವಕರನ್ನು ಹೊಂದಲಿದೆ. ಯುವಕರು ತಮ್ಮಲ್ಲಿರುವ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರತಿಭೆಗಳನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಯದ ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಉತ್ತರ ಕರ್ನಾಟಕವು ಜನಪದ ಕಲೆಗಳ ಬೀಡಾಗಿದೆ. ನಮ್ಮಲ್ಲಿಯ ದೇಸಿ ಕಲೆಗಳ ಕುರಿತು ಇಂದಿನ ಯುವಕರಿಗೆ ಅರಿವೇ ಇಲ್ಲ. ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಯುವಕರ ಮೇಲಿದೆ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಡಾ. ಎಚ್.ಸಿ. ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯ ಆಧಾರಿತ ಶಿಕ್ಷಣ ಮಹತ್ವಪೂರ್ಣವಾಗಿದೆ. ಜನಪದ ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿಗಳಾದ ಮೊಂಟು ಪತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ವಿವಿಯಿಂದ 27 ವಿದ್ಯಾರ್ಥಿಗಳು ತುಮಕೂರಿಗೆ ಹಾಗೂ ತುಮಕೂರು ವಿವಿಯಿಂದ 25 ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಭಾಗವಹಿಸಿದ್ದಾರೆ.

ವಿವಿಯ ವಿದ್ಯಾರ್ಥಿ ಕಲ್ಯಾಣ ಘಟಕ ನಿರ್ದೇಶಕ ಪ್ರೊ. ಶಶಿಕಾಂತ ಮಜಗಿ, ನೆಹರು ಯುವ ಕೇಂದ್ರ ಕಾರ್ಯಕ್ರಮ ಅಧಿಕಾರಿ ರಾಮ್‌ರಾವ್ ಬಿರಾದಾರ್ ವೇದಿಕೆಯಲ್ಲಿದ್ದರು.

ನಾಟಕ ಹಾಗೂ ಪ್ರದರ್ಶನ ಕಲೆ ವಿಭಾಗದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ತಂಡದಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಐದು ದಿನಗಳ ವಿನಿಮಯ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಲಿದ್ದಾರೆ.

ಕಾರ್ಯಕ್ರಮವನ್ನು ಡಾ. ಶಶಿಧರ ಕೆಲ್ಲೂರು ನಿರೂಪಿಸಿದರು. ಈ ಸಂದರ್ಭ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ