ವಿದ್ಯುತ್ ವ್ಯವಸ್ಥೆಗಳು ಸುರಕ್ಷಿತವಾಗಿರಲು ಗ್ರೌಂಡಿಂಗ್ ಅತ್ಯಗತ್ಯ

KannadaprabhaNewsNetwork |  
Published : Jan 08, 2025, 12:16 AM IST
83 | Kannada Prabha

ಸಾರಾಂಶ

ಅರ್ಥಿಂಗ್‌ಮತ್ತು ಗ್ರೌಂಡಿಂಗ್‌ವಿದ್ಯುತ್‌ಸ್ಥಾಪನೆಯ ಬಹುಮುಖ್ಯ ಅಂಗವಾಗಿದ್ದು, ಅಪಾಯಗಳ ವಿರುದ್ಧ ರಕ್ಷಣೆ ನೀಡುವ ಪ್ರಮುಖ ವ್ಯವಸ್ಥೆಗಳು. ಗ್ರೌಂಡಿಂಗ್- ವಿದ್ಯುತ್ ಆಘಾತ, ಬೆಂಕಿ ಮತ್ತು ಉಪಕರಣಗಳು ಮತ್ತು ಸಲಕರಣೆಗಳ ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯುತ್ ವ್ಯವಸ್ಥೆಗಳು ಸುರಕ್ಷಿತವಾಗಿರಲು ಗ್ರೌಂಡಿಂಗ್ ಅತ್ಯಗತ್ಯ ಎಂದು ಕರ್ನಾಟಕ ಪವರ್ ಎಂಜಿನಿಯರ್ಸ್ ಅಕಾಡೆಮಿ ತಾಂತ್ರಿಕ ಜರ್ನಲ್ ಸಮಿತಿ ಅಧ್ಯಕ್ಷ ಯು.ಎಸ್. ನಾಯ್ಕ ತಿಳಿಸಿದರು.

ನಗರದಲ್ಲಿ ಸದರ್ನ್ ಸ್ಟಾರ್ ಹೊಟೇಲ್ ಸಭಾಂಗಣದಲ್ಲಿ ಕರ್ನಾಟಕ ಪವರ್ ಎಂಜಿನಿಯರ್ಸ್‌ಅಕಾಡೆಮಿಯು ಮಂಗಳವಾರ ಆಯೋಜಿಸಿದ್ದ ಎಂ.ಎಲ್‌. ಶೇಷಾದ್ರಿ ವಿರಚಿತ ‘ಎಲೆಕ್ಟ್ರಿಕಲ್ ಅರ್ಥಿಂಗ್’, ಹೇಮಂತ್‌ಲಿಂಗಪ್ಪ ರಚನೆಯ ‘ಮತ್ತೆ ಮತ್ತೆ ಮಳೆ’ ಕವನ ಸಂಕಲನ ಹಾಗೂ ‘ತಾಂತ್ರಿಕ ಜರ್ನಲ್’ ಬಿಡುಗಡೆ ಕಾರ್ಯಕ್ರಮದಲ್ಲಿ‌ಅವರು‌ಮಾತನಾಡಿದರು.

ಅರ್ಥಿಂಗ್‌ಮತ್ತು ಗ್ರೌಂಡಿಂಗ್‌ವಿದ್ಯುತ್‌ಸ್ಥಾಪನೆಯ ಬಹುಮುಖ್ಯ ಅಂಗವಾಗಿದ್ದು, ಅಪಾಯಗಳ ವಿರುದ್ಧ ರಕ್ಷಣೆ ನೀಡುವ ಪ್ರಮುಖ ವ್ಯವಸ್ಥೆಗಳು. ಗ್ರೌಂಡಿಂಗ್- ವಿದ್ಯುತ್ ಆಘಾತ, ಬೆಂಕಿ ಮತ್ತು ಉಪಕರಣಗಳು ಮತ್ತು ಸಲಕರಣೆಗಳ ಹಾನಿಯ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದರು.

ಎಲೆಕ್ಟ್ರಿಕಲ್ ಅರ್ಥಿಂಗ್ ಕೃತಿ ಮತ್ತು ಸಂಸ್ಥೆಯ ಜರ್ನಲ್‌ಹೊರ ತಂದಿರುವುದು ಯುವ ಎಂಜಿನಿಯರ್‌ ಗಳಿಗೆ ಪ್ರೇರಣೆಯಾಗಲಿದೆ. ಇದರಿಂದ ಸಂಸ್ಥೆಯ ಕಾರ್ಯ ಚಟುವಟಿಕೆ ತಿಳಿದುಕೊಳ್ಳಲು, ಸಲಹೆ ನೀಡಲು ಉಪಯುಕ್ತವಾಗಲಿದೆ. ಮೊಬೈಲ್ ಬಳಕೆಯಿಂದ ಜೀವನ ನಿಷ್ಕ್ರಿಯವಾಗುತ್ತಿದೆ. ಬರವಣಿಗೆ ಕಲೆ ರೂಢಿಸಿಕೊಳ್ಳಬೇಕು. ನಿತ್ಯದ ಕೆಲಸದ ಜೊತೆ ಹೊರಗಿನ‌ಪ್ರಪಂಚ ತಿಳಿಯಬೇಕು. ಪುಸ್ತಕ ಓದಬೇಕು ಎಂದು ಅವರು ಸಲಹೆ ನೀಡಿದರು.

ಸೆಸ್ಕ್‌ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಮಾತನಾಡಿ, ಕೃತಿ ಓದಿಗೆ ಮಾತ್ರವಲ್ಲದೆ ಪ್ರಾಯೋಗಿಕವಾಗಿ ಇದನ್ನು ಬಳಕೆ ಮಾಡಿಕೊಳ್ಳಬೇಕು. ಇಂದು ಕೆಪಿಟಿಸಿಎಲ್ ಸ್ಟೇಷನ್‌ ಗಳಲ್ಲಿ ಕೆಲಸ ಮಾಡುವವರಿಗೆ ತಾಂತ್ರಿಕವಾಗಿ ಕೆಲವೊಂದು ಮಾಹಿತಿಗಳು ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ವಿಷಯಗಳ ಬಗ್ಗೆ ತರಬೇತಿ ನೀಡಬೇಕಾದ ಅಗತ್ಯವಿದೆ ಎಂದರು.

ಎಲ್ಲಾ ಎಸ್ಕಾಂಗಳಿಗಿಂತ ಸೆಸ್ಕ್ ಮುಂಚೂಣಿಯಲ್ಲಿದೆ. ಹೊಸ ಕೆಲಸ ಮಾಡುವುದಕ್ಕಿಂತ ಇರುವ ಕೆಲಸಗಳನ್ನು ಸಮರ್ಪಕವಾಗಿ ಮಾಡಿದರೆ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗಲಿದೆ. ಫೀಡರ್ ನಿರ್ವಹಣೆಯಲ್ಲಿ ಸೆಸ್ಕ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. 3 ತಿಂಗಳಲ್ಲಿ ಒಮ್ಮೆ ಈ ಕಾರ್ಯಕ್ರಮ ಮಾಡಿದರೆ ಒಳ್ಳೆಯದು. ಇದರಿಂದ ನಮ್ಮ ಎಂಜಿನಿಯರ್‌ ಗಳಿಗೂ ಹಾಗೂ ನಮ್ಮಲ್ಲಿರುವ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಅವರು ತಿಳಿಸಿದರು.

ಕೆಪಿಇಎ ಅಕಾಡೆಮಿಯ ಅಧ್ಯಕ್ಷ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, ಕೃತಿಯಲ್ಲಿ ತಾಂತ್ರಿಕ ವಿಚಾರವಾದ ಅರ್ಥಿಂಗ್ ಬಗ್ಗೆ ಸಂಕ್ಷಿಪ್ತವಾಗಿ ಹೇಳಲಾಗಿದೆ. ಅರ್ಥಿಂಗ್ ಎಂಬುದು ವಿದ್ಯುತ್ ವಿಷಯದಲ್ಲಿ ಮುಖ್ಯವಾಗಿದೆ. ಕೇವಲ ಕೆಇಬಿ ಅಥವಾ ಇತರೆ ಎಸ್ಕಾಂಗಳಿಗೆ ಮಾತ್ರವಲ್ಲದೆ, ಹೊರ ರಾಜ್ಯದ ಎಸ್ಕಾಂಗಳಿಗೂ ಹೆಚ್ಚಿನ ಉಪಯೋಗ ಆಗಬೇಕೆಂಬ ಉದ್ದೇಶದಿಂದ ಈ ಪುಸ್ತಕ ಹೊರತರಲಾಗಿದೆ ಎಂದರು.

ಅಕಾಡೆಮಿಯ ಕಾರ್ಯದರ್ಶಿ ಎಂ.ಎಚ್. ಜಗದೀಶ್, ಖಜಾಂಚಿ ಎಂ.ಜಿ. ಹಾಲಸ್ವಾಮಿ, ಜಂಟಿ ಕಾರ್ಯದರ್ಶಿ ಧನಂಜಯ, ಕೆಪಿಟಿಸಿಎಲ್‌ಮೈಸೂರು ವಲಯ ಎಸ್‌ಇಇ ರಂಗರಾಜು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಪಂಗಳು ಸ್ಥಳೀಯ ಸರ್ಕಾರವಿದ್ದಂತೆ: ಎಚ್.ಟಿ.ಮಂಜು
ಚೈತನ್ಯ ಕುಮಾರ್‌ಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ