ಕಮಲಹಾಸನ್ ಸಿನಿಮಾ ಪ್ರದರ್ಶಿಸಿದರೆ ಹೋರಾಟ: ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ

KannadaprabhaNewsNetwork |  
Published : May 31, 2025, 01:18 AM IST
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ತಮಿಳು ನಟ ಕಮಲಹಾಸನ್ ವಿರುದ್ಧ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯ ಚಿತ್ರಮಂದಿರ ಮಾಲೀಕರು ಕಮಲಹಾಸನ್ ನಟನೆಯ ಚಿತ್ರವನ್ನು ಪ್ರದರ್ಶನ ಮಾಡಬಾರದು. ಒಂದುವೇಳೆ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಚಿತ್ರಮಂದಿರ ಮಾಲೀಕರೆ ಹೊಣೆಯಾಗಿರುತ್ತಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿರುವ ತಮಿಳು ನಟ ಕಮಲಹಾಸನ್ ಕನ್ನಡಿಗರ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಶುಕ್ರವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಗುತ್ತಲ ರಸ್ತೆಯಲ್ಲಿರುವ ಕರವೇ ಕಚೇರಿಯಿಂದ ಪ್ರತಿಭಟನಾ ಪಾದಯಾತ್ರೆ ಆರಂಭಿಸಿದ ಕಾರ್ಯಕರ್ತರು ಸಂಗೂರ ಕರಿಯಪ್ಪ ವೃತ್ತದ ಮಾರ್ಗವಾಗಿ ಪಿ.ಬಿ. ರಸ್ತೆಯ ಮೂಲಕ ಹೊಸಮನಿ ಸಿದ್ದಪ್ಪ ವೃತ್ತವನ್ನು ತಲುಪಿದರು. ಪಾದಯಾತ್ರೆಯುದ್ದಕ್ಕೂ ಕಮಲಹಾಸನ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಯ್ಯ ಬಸರೀಹಳ್ಳಿಮಠ ಮಾತನಾಡಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ತಮಿಳು ನಟ ಕಮಲಹಾಸನ್ ದುರುದ್ದೇಶಪೂರಿತವಾಗಿ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿಕೆ ನೀಡಿರುವುದು ರಾಜ್ಯದ ಕನ್ನಡಿಗರನ್ನು ಕೆರಳಿಸಿದೆ.

ಕನ್ನಡ ಭಾಷೆಯ ಶ್ರೀಮಂತಿಕೆ, ಇತಿಹಾಸ, ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕನ್ನಡಿಗರಿಂದ ತೀವ್ರ ಖಂಡನೆ ಹಾಗೂ ವಿರೋಧ ವ್ಯಕ್ತವಾದರೂ ತಮ್ಮ ತಪ್ಪನ್ನು ಸಮರ್ಥಿಸಿಕೊಂಡು ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಈ ಕೂಡಲೇ ಬೇಷರತ್ ಆಗಿ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಕನ್ನಡದ ಗಂಧ ಗಾಳಿ ಬಗ್ಗೆ ಗೊತ್ತಿಲ್ಲದಿದ್ದರೆ ಕರವೇ ಕಾರ್ಯಕರ್ತರನ್ನು ಕೇಳಿ. ತಮಿಳು ಭಾಷಿಗರ ಓಲೈಸಲು ಮತ್ತು ಎತ್ತಿಕಟ್ಟಲಿಕ್ಕೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಉದ್ದಟತನದ ಹೇಳಿಕೆ ನೀಡಿ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿರುವ ಕಮಲಹಾಸನ್ ನಡೆ ಖಂಡನೀಯ. ಕನ್ನಡಿಗರನ್ನು ಕೆಣಕಿದ ಯಾವ ನಟರು ಯಶಸ್ಸು ಕಂಡಿಲ್ಲ.

ಜಿಲ್ಲೆಯ ಚಿತ್ರಮಂದಿರ ಮಾಲೀಕರು ಕಮಲಹಾಸನ್ ನಟನೆಯ ಚಿತ್ರವನ್ನು ಪ್ರದರ್ಶನ ಮಾಡಬಾರದು. ಒಂದುವೇಳೆ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಚಿತ್ರಮಂದಿರ ಮಾಲೀಕರೆ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರಾಜ್ಯ ಸಮಿತಿ ಮುಖಂಡ ಸತೀಶಗೌಡ ಮುದಿಗೌಡ್ರ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡಮಿ, ತಾಲೂಕಾಧ್ಯಕ್ಷ ಹಾಲೇಶ ಹಾಲಣ್ಣನವರ, ಸಂತೋಷ ಪಾಟೀಲ, ಮಾರುತಿ ಪೂಜಾರ, ಕರಿಯಪ್ಪ ಕೊರವರ, ಸಿಕಂದರ ವಾಲಿಕಾರ, ಬಿ.ಎಚ್. ಬಣಕಾರ, ಮುಖಂಡರಾದ ಯಶವಂತಗೌಡ ದೊಡಗೌಡ್ರ, ಹಸನಸಾಬ ಹತ್ತಿಮತ್ತೂರ, ಪರಶುರಾಮ ಈಳಗೇರ, ಅಬ್ಬು ಕೊಡಮಗ್ಗಿ, ನಾಗರಾಜ ಪೂಜಾರ, ಬಸವರಾಜ ಅರಳಿ, ನಾಗರಾಜ ದೇಸಾಯಿ, ಗೌಸಪಾಕ್ ಬಾಲೆಬಾಯಿ, ಸಲೀಂ ದುಕಾಂದರ, ಈರಮ್ಮ ಕಾಡಸಾಲಿ, ಮಂಗಳಾ ಬಾಣಾಪುರ, ಲಕ್ಷ್ಮಿ ನಾಳಕರ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?