ಶಿರಸಿ: ಕಸ್ತೂರಿರಂಗನ್ ವರದಿಯ ೭ನೇ ಅಧಿಸೂಚನೆ ಆಕ್ಷೇಪಿಸಿ ಭೌತಿಕ ಸರ್ವೇ ಮಾಡಬೇಕು. ಅಲ್ಲದೇ ಗ್ರಾಮಸಭೆ ಕರೆಯಬೇಕೆಂದು ಆಗ್ರಹಿಸಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ರವೀಂದ್ರ ನಾಯ್ಕ ನೇತೃತ್ವದ ಹೋರಾಟಗಾರರ ನಿಯೋಗವು ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಿತು.
ಪರಿಸರ ರಕ್ಷಣಾ ವಲಯಗಳ ಸುತ್ತಲಿನ ೧೦ ಕಿಮೀ ಪ್ರದೇಶಗಳನ್ನು ಬಫರ್ ವಲಯವೆಂದು ಗುರುತಿಸಿರುವುದು, ವರದಿ ತಯಾರಿಸುವಾಗ ಜನಪ್ರತಿನಿಧಿ ಮತ್ತು ಸ್ಥಳೀಯ ಸಂಸ್ಥೆಗಳ, ಜನಪ್ರತಿನಿಧಿಗಳ, ಗ್ರಾಮಸಭೆಗಳ ಮಾನ್ಯತೆ ನೀಡದೇ ಇರುವುದು ಅವೈಜ್ಞಾನಿಕ ವರದಿಗೆ ಕಾರಣವಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ರವೀಂದ್ರ ನಾಯ್ಕ ಅವರು ಸಚಿವರಲ್ಲಿ ಪ್ರಸ್ತಾಪಿಸಿದರು.ಈ ಹಿಂದೆ ರಾಜ್ಯ ಸರ್ಕಾರದ ಸಚಿವ ಸಂಪೂಟ ಉಪ ಸಮಿತಿ ರಚಿಸಿ ಸಚಿವ ಸಂಪೂಟ ಸಭೆಯಲ್ಲಿ ಅಕ್ಟೋಬರ್ ೨೦೧೫ರಲ್ಲಿ ಕೈಗೊಂಡ ನಿರ್ಣಯ, ಕರ್ನಾಟಕದ ಸೂಕ್ಷ್ಮ ಪ್ರದೇಶವೆಂದು ೨೦೬೬೮ ಇದ್ದು, ಅವುಗಳಲ್ಲಿ ಈಗಾಗಲೇ ೧೬,೬೩೨ ಸಂರಕ್ಷಿತ ಅರಣ್ಯವೆಂದು ಘೋಷಿಸಲ್ಲಟ್ಟಿದೆ. ಹೀಗಿರುವಾಗ ಹೆಚ್ಚಿನ ನಿರ್ಬಂಧ ಅವಶ್ಯವಿಲ್ಲವೆಂದು ರಾಜ್ಯ ಸರ್ಕಾರ ನಿಲುವು ಪ್ರಕಟಿಸಿದೆ. ಅಲ್ಲದೇ, ಜನಜೀವನ ಪ್ರದೇಶದಿಂದ ಸೂಕ್ಷ್ಮ ಪ್ರದೇಶದಿಂದ ಹೊರಗಿಡಬೇಕೆಂದು ಈಗಾಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಆಕ್ಷೇಪಿಸಿದೆ ಎಂದು ನಿಯೋಗದವರು ಸಚಿವರ ಗಮನಕ್ಕೆ ತಂದರು.ಇದಕ್ಕೂ ಮುನ್ನ ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕ ಅಂಶ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ರಚಿಸಲಾದ ಶಿಫಾರಸು ಪಟ್ಟಿಯನ್ನು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರು ಬಿಡುಗಡೆಗೊಳಿಸಿದರು.ಹೋರಾಟಗಾರರ ವೇದಿಕೆಯ ರಾಜ್ಯ ಸಂಚಾಲಕಿ ರಂಜಿತಾ ರವೀಂದ್ರ, ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಬಿಡಿ ನಾಯ್ಕ ಕುರಗೆತೋಟ, ಭಾಸ್ಕರ್ ಕುರಗೆತೋಟ, ಶ್ರೀಧರ ಎಸ್. ಹೆಗಡೆ ಕೆರೆಮನೆ, ಜಗದೀಶ್ ನಾಯ್ಕ ಬಿಕ್ಕಳಸೆ, ಆರೀಫ್ ಶೇಖ ಬಿಸಲಕೊಪ್ಪ ನಿಯೋಗದಲ್ಲಿದ್ದರು.