ಕನ್ನಡಪ್ರಭ ವಾರ್ತೆ ಮೈಸೂರು
ಯಾವುದೇ ಪೂರ್ವಭಾವಿ ಸಭೆ ನಡೆಸದೆ, ಮಾಹಿತಿಯನ್ನೂ ನೀಡದೆ ಕಾಯಕ ಶರಣರ ಜಯಂತಿ ಆಯೋಜಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ವಿರುದ್ಧ ಸೂಕ್ತ ಕ್ರಮಕ್ಕೆ ಆ ಗ್ರಹ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಶಾಖೆ ಮುಖಂಡರು ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರವು ಫೆ. 10ರಂದು ರಾಜ್ಯಾದ್ಯಂತ ಆಯೋಜಿಸಿರುವ ಕಾಯಕ ಶರಣರ ಜಯಂತಿಯನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದಾರೆ. ಕಾಯಕ ಶರಣರ ಜಯಂತಿ ಪ್ರಯುಕ್ತ ಶಿವಶರಣರಾದ ಮಾದರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿಗಳ ಜಯಂತಿ ಹಮ್ಮಿಕೊಂಡಿರುವುದು ಗೌರವಯುತ ಸಮಾಜಮುಖಿ ಕಾರ್ಯಕ್ರಮವಾಗಿದೆ.
ಆದರೆ, ಮೈಸೂರು ಜಿಲ್ಲಾಡಳಿತವು ಈ ಕಾರ್ಯಕ್ರಮವನ್ನು ಫೆ.10ರ ಬೆಳಗ್ಗೆ 10.30ಕ್ಕೆ ಎಂದು ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ. ಆದರೆ, ಯಾವುದೇ ದಲಿತ ಸಮುದಾಯದ ಶಾಸಕರಿಗೆ, ಜನಪ್ರತಿನಿಧಿಗಳಿಗೆ, ಸಮುದಾಯದ ಮುಖಂಡರಿಗೆ ತಿಳಿಸದೇ ಅಥವಾ ಪೂರ್ವಭಾವಿ ಸಭೆ ಕರೆಯದೆ, ಅಧಿಕಾರಿಗಳು ಏಕಪಕ್ಷೀಯವಾಗಿ ಆಹ್ವಾನ ಪತ್ರಿಕೆ ಮುದ್ರಿಸಿ, ಕಾರ್ಯಕ್ರಮದ ಹಿಂದಿನ ದಿನ ಸಂಜೆ 4ಕ್ಕೆ ಕೆಲವರಿಗೆ ಮಾತ್ರ ಹಂಚಿದ್ದಾರೆ.ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಸಮುದಾಯದ ಮುಖಂಡರಿಗೆ ವಿಷಯವನ್ನು ತಿಳಿಸದೇ ಲೋಪ ಎಸಗಿದ್ದಾರೆ ಎಂದರು.
ದಲಿತ ಸಮುದಾಯದ ಕಾಯಕ ಶರಣರ ಜಯಂತಿ ಕಾರ್ಯಕ್ರಮಕ್ಕೆ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತದೆ. ಕಾರ್ಯಕ್ರಮದಲ್ಲಿ ಮಧ್ಯಾಹ್ನ 12 ಗಂಟೆಗೆ ಆದರೂ ಕೂಡ ಕಿರು ರಂಗಮಂದಿರದ ಸಭಾಂಗಣದಲ್ಲಿ ಜನರೇ ಇಲ್ಲದೇ ಬಣಗುಡುತ್ತಿತ್ತು. ಇದಕ್ಕೆಲ್ಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕತಿ ಇಲಾಖೆ ಅಧಿಕಾರಿಗಳೇ ಕಾರಣ. ಇಂತಹ ದಲಿತ ವಿರೋಧಿ ಅಧಿಕಾರಿಗಳ ಮೇಲೆ ದೌರ್ಜನ್ಯ ಕಾರ್ಯಕ್ರಮದಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಸಾಮಾಜಿಕ ಹೋರಾಟಗಾರ ಕೆ. ಪ್ರಸನ್ನ ಚಕ್ರವರ್ತಿ, ರಂಗಸ್ವಾಮಿ. ಸಿ. ಈಶ್ವರ ಚಕ್ಕಡಿ, ಅಹಿಂದ ಜವರಪ್ಪ, ವಿಜಯಕುಮಾರ್ಮೊದಲಾದವರು ಒತ್ತಾಯಿಸಿದ್ದಾರೆ.
ಸಾಂಕೇತಿಕವಾಗಿ ಕಾರ್ಯಕ್ರಮಕಿರುರಂಗ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಾಜಿ ಮೇಯರ್ ಪುರುಷೋತ್ತಮ್, ಮುಖಂಡರಾದ ಮೋಹನಕುಮರ್ಗೌಡ, ಬಾಲಕೃಷ್ಣ, ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಚಮರಂ ಮೊದಲಾದವರು ಶರಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಇದ್ದರು.