ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗ್ರಾಮೀಣ ಮುಖ್ಯ ರಸ್ತೆಗಳು ಸೇರಿದಂತೆ ಎಲ್ಲ ರೀತಿಯ ಸಂಪರ್ಕ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದ ಕೆದಕಲ್ ಹೊರೂರು ಚೆಟ್ಟಳ್ಳಿ ಸಂಪರ್ಕ ರಸ್ತೆಗೆ 45 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟಿಕರಣ ಮತ್ತು ಪ್ರಥಮ ಹಂತದ ರಸ್ತೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೆದಕಲ್ ಗ್ರಾಮ ಪಂಚಾಯಿತಿಯು ದೊಡ್ಡ ವ್ಯಾಪ್ತಿಯನ್ನು ಹೊಂದಿದ್ದು, ಜನಸಂಖ್ಯೆ ಕಡಿಮೆ ಇದೆ. ಈಗಾಗಲೇ ಹಲವು ಇಲಾಖಾ ಅನುದಾನಗಳ ಅಡಿಯಲ್ಲಿ ಒಟ್ಟು 90 ಲಕ್ಷ ರು.ನಷ್ಟು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಾಮಗಾರಿಗಳು ಮುಗಿದಿದ್ದು, ಕೆಲವು ಕಾಮಗಾರಿಗಳನ್ನು ಮುಂದುವರಿದ ಕಾಮಗಾರಿಯೆಂದು ಪರಿಗಣಿಸಬೇಕಾಗಿದೆ. ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭ ತೋಟದ ಮಾಲೀಕರು ರಸ್ತೆಯ 2 ಬದಿಯ ಮರಗಳನ್ನು ತೋಟದ ಬೇಲಿಗಳನ್ನು ತೆರವುಗೊಳಿಸಿಕೊಡುವುದರೊಂದಿಗೆ ಅಭಿವೃದ್ಧಿಗೆ ತಮ್ಮ ಸಹಕಾರ ನೀಡುವುದರಿಂದ ಕಾಮಗಾರಿಗಳು ಹೆಚ್ಚು ಕಾಲ ಉಪಯೋಗಕ್ಕೆ ಬರುತ್ತದೆ ಎಂದರು.
ಕೆದಕಲ್ ಗ್ರಾಮ ಪಂಚಾಯಿತಿಯ ಕೆಲವು ಹಳ್ಳಿಗಳಲ್ಲಿ ಆನೆ ಮಾನವ ಸಂಘರ್ಷ ಹೆಚ್ಚಿದ್ದು, ಈಗಾಗಲೇ ಹಲವು ರೀತಿಯ ಉಪಶಮನಕಾರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನದೊಂದಿಗೆ ಅಭಿವೃದ್ಧಿ ಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ನುಡಿದರು.ಗ್ಯಾರಂಟಿ ಅನುಷ್ಠಾನ ಸಮತಿ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ಎಂ.ಕೆ.ಪುಷ್ಪ, ಉಪಾಧ್ಯಕ್ಷೆ ಪಾರ್ವತಿ ಸೋಮಯ್ಯ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ಆನಂದ, ನಿಕಟಪೂರ್ವ ಉಪಾಧ್ಯಕ್ಷ ಮುಕ್ಕಾಟಿರ ಸಂಜುಪೊನ್ನಪ್ಪ, ಸದಸ್ಯರಾದ ಬಿದ್ದಪ್ಪ, ಶಿವಶಂಕರ್, ಜಿ.ಪಂ.ಅಭಿಯಂತರರಾದ ಫಯಾಜ್ ಅಹ್ಮದ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫಿಕ್ಖಾನ್, ಕಂಬಿಬಾಣೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮಧುನಾಗಪ್ಪ, ಮಾಜಿ ಸದಸ್ಯರಾದ ಕಾಯರ್ಮಾರ್ ದೇವಿಪ್ರಸಾದ್, ವೆಂಕಪ್ಪ ಕೋಟ್ಯಾನ್, ಚೆಪ್ಪುಡಿರ ಸತೀಶ್, ಗ್ರಾಮಸ್ಥರಾದ ಕೊರವಂಡ ಸಂತೋಷ್ ಪೂವಯ್ಯ, ಸಿ.ಸೋಮಣ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.