ಬಾಡೂಟ, ಔತಣಕೂಟ, ಮಂದಿರಗಳ ಮೇಲೆ ಕಣ್ಣಿಡಿ: ಡಿಸಿ

KannadaprabhaNewsNetwork | Updated : Apr 02 2024, 07:47 AM IST

ಸಾರಾಂಶ

ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂದಿಗಳು, ವಿವಿಧ ತಂಡಗಳ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಕೆಲ ನಿರ್ದೇಶನ ನೀಡಿದರು.

 ಚಿತ್ರದುರ್ಗ :  ಮತದಾರರ ಮನವೊಲಿಕೆಯ ಭಾಗವಾಗಿ ಪಟ್ಟಣದ ಹೊರವಲಯಗಳಲ್ಲಿ ಬಾಡೂಟ, ಔತಣ ಏರ್ಪಡಿಸುವ ಪ್ರಕ್ರಿಯೆಗಳು ಸಹಜವಾಗಿ ನಡೆಯುತ್ತಿದ್ದು ಇಂಥವುಗಳ ಮೇಲೆ ಕಣ್ಣಿಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬಿಗಿ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು, ವಿವಿಧ ತಂಡಗಳ ಮುಖ್ಯಸ್ಥರು ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಸೋಮವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಗೆ ನಿಯೋಜಿತ ಅಧಿಕಾರಿ-ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯ ಕಟ್ಟುನಿಟ್ಟಾಗಿ ನಿರ್ವಹಿಸದೆ ಲೋಪವೆಸಗಿದರೆ ಸಂಭಾವ್ಯ ಘಟನೆಗಳಿಗೆ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ಆಯ್ಕೆ ಬಯಸುವ ಉಮೇದುವಾರರು ತಮ್ಮ ಅರ್ಜಿ ಸಲ್ಲಿಕೆಗೆ ಕೊನೆಯ ಮೂರು ದಿನಗಳು ಮಾತ್ರ ಉಳಿದಿದೆ. ಹಾಗಾಗಿ ಚುನಾವಣೆಯ ಕರ್ತವ್ಯ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ನಿಯೋಜಿತ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯತೋರಬಾರದು. ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಮಂದಿರ, ಮಸೀದಿ, ಚರ್ಚುಗಳಲ್ಲಿ ಸಭೆ-ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ಇವೆಲ್ಲವೂಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸಿ, ನಿಯಮಾನುಸಾರ ಕ್ರಮಕ್ಕೆ ವರದಿ ಮಾಡುವಂತೆ ಸೂಚಿಸಿದರು.

ಚೆಕ್‍ಪೋಸ್ಟ್ ಸಿಬ್ಬಂದಿ ಹಾಗೂ ಸಂಚಾರಿ ದಳ ಸೇರಿದಂತೆ ವಿವಿಧ ತಂಡಗಳು ಸದಾ ಎಚ್ಚರಿಕೆಯಿಂದಿದ್ದು, ಕಾರ್ಯನಿರ್ವಹಿಸಬೇಕು. ಈ ವಿಷಯಗಳಲ್ಲಿ ನೋಡಲ್ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಯ ಅಧಿಕಾರಿಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಗಳಲ್ಲಿ ಪ್ರಕಟವಾಗುವ ಕಾಸಿಗಾಗಿ ಸುದ್ದಿ, ಜಾಹಿರಾತು, ವೈಯಕ್ತಿಕ ತೇಜೋವಧೆ ಮಾಡುವಂತಹ ಸುದ್ದಿ ಭಾಗಗಳು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ವಾಗುವ ಪ್ರತಿ ವಿಡಿಯೋ ತುಣುಕುಗಳ ಬಗ್ಗೆ ಗಮನಿಸಿ, ನಿಯಮಾನುಸಾರ ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದರು.

ಚುನಾವಣಾ ಕರ್ತವ್ಯಕ್ಕೆ ಅಧಿಕಾರಿ-ಸಿಬ್ಬಂದಿಗೆ ಈಗಾಗಲೇ ಹಲವು ತರಬೇತಿಗಳಾಗಿದ್ದು, ಇನ್ನುಳಿದ ಮತಗಟ್ಟೆ ಮತ್ತಿತರ ಸಿಬ್ಬಂದಿಗಳಿಗೆ ಶೀಘ್ರದಲ್ಲಿ ತರಬೇತಿ ಆಯೋಜಿಸಲಾಗುತ್ತಿದೆ. ಸಲ್ಲದ ನೆಪವೊಡ್ಡಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಕೇಳುವ ನೌಕರರ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

85 ವರ್ಷ ಮೇಲ್ಪಟ್ಟ ವಿಕಲಾಂಗರು ಸೇರಿದಂತೆ 12 ಡಿ ತಾವಿರುವಲ್ಲಿಯೇ ಮತದಾನ ಮಾಡಲು ಕೋರಿಕೆ ಸಲ್ಲಿಸುವ ಅರ್ಜಿಯ ಪ್ರತಿಯನ್ನು ಅರ್ಹರೆಲ್ಲರಿಗೂ ತಲುಪಿಸಲಾಗುವುದು. ಅಂಚೆ ಮತದಾನ ಬಯಸಿರುವವರ ವಿವರಗಳನ್ನು ಸಂಬಂಧಿಸಿದ ಅಧಿಕಾರಿಗಳು ಸಕ್ರಮ ಪ್ರಾಧಿಕಾರಕ್ಕೆ ತಲುಪಿಸುವಂತೆ ಸೂಚಿಸಿದ ಅವರು, ಚುನಾವಣೆಯ ಎಲ್ಲಾ ಕಾರ್ಯಗಳಲ್ಲಿ ಅಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅಗತ್ಯ ಎಂದರು.

ಈ ಹಿಂದಿನ ಚುನಾವಣೆಗಳಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳಲ್ಲಿನ ಮತದಾರರ ಮನವೊಲಿಕೆಗೆ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುವುದು. ಮತದಾನ ಕೇಂದ್ರದಲ್ಲಿ ಕುಡಿವ ನೀರು, ವಿದ್ಯುತ್ ಮುಂತಾದ ಸೌಲಭ್ಯ ಗಳನ್ನು ಒದಗಿಸಬೇಕು. ಆರೋಗ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಕುಡಿಯುವ ನೀರು ಸರಬರಾಜು ಮುಂತಾದ ಇಲಾಖೆಯ ಅಧಿಕಾರಿಗಳು ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಕಾರ್ಯಸ್ಥಾನದಲ್ಲಿರುವಂತೆ ಸೂಚಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಚೆಕ್‍ಪೋಸ್ಟ್ ಗಳನ್ನು ಹಾದು ಹೋಗುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವಂತೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮತ ಹಾಕಿ ಪ್ರಜಾಪ್ರಭುತ್ವ ಮೌಲ್ಯ ರಕ್ಷಿಸಿ: ಇಒ ಬಿ.ಎಸ್.ಲಕ್ಷ್ಮಣ್ ಕರೆ

ಚಳ್ಳಕೆರೆ: ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ತಾಲ್ಲೂಕು ಸ್ಪೀಪ್ ಸಮಿತಿ ಅಧ್ಯಕ್ಷ, ಇಒ ಬಿ.ಎಸ್.ಲಕ್ಷ್ಮಣ್ ತಿಳಿಸಿದರು.

ಅವರು, ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಸ್ಪೀಫ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಮೋಟಾರ್ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.ಈ ತಿಂಗಳ ೨೬ರಂದು ನಡೆಯುವ ಲೋಕಸಭಾ ಚುನಾವಣೆ ಮಹತ್ವದಿಂದ ಕೂಡಿದೆ. ಪ್ರತಿ ಚುನಾವಣೆಯಲ್ಲೂ ಮತದಾನ ಮಾಡುವ ಅವಕಾಶದಿಂದ ಯಾವ ಮತದಾರರೂ ವಂಚಿತರಾಗಬಾರದು. 

ಮತದಾನಕ್ಕೆ ಪ್ರೇರಣೆಯಾಗಲಿ ಎಂಬ ದೃಷ್ಠಿಯಿಂದ ಜಿಲ್ಲಾ ಸ್ಪೀಪ್ ಸಮಿತಿ ಮಾರ್ಗದರ್ಶನದಲ್ಲಿ ತಾಲ್ಲೂಕು ಸ್ಪೀಫ್ ಸಮಿತಿಯಿಂದ ಮತದಾರ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆ, ನಗರಸಭೆ, ತಾಲ್ಲೂಕು ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಬೈಕ್ ರ‍್ಯಾಲಿಗೆ ಸಾಥ್ ನೀಡಿದರು.

ತಾಲ್ಲೂಕು ಸ್ಪೀಪ್ ಸಮಿತಿ ಕಾರ್ಯದರ್ಶಿ, ಪೌರಾಯುಕ್ತ ಜೀವನ್‌ ಕಟ್ಟಿಮನಿ ಮಾತನಾಡಿ, ಮತದಾನ ಜಾಗೃತಿ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈಗಾಗಲೇ ಮರ‍್ನಾಲ್ಕು ಬಾರಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೋಬಳಿ ಮಟ್ಟದಲ್ಲೂ ಸಹ ಮತದಾನ ಜಾಗೃತಿ ಅಭಿಯಾನ ಕೈಗೊಂಡಿದೆ. ಲೋಕಸಭಾ ಚುನಾವಣೆಯ ಮತದಾನ ದಿನಾಂಕ ಈಗಾಗಲೇ ಹತ್ತಿರವಾಗುತ್ತಿದೆ. ತಾಲ್ಲೂಕು ಸ್ಪೀಪ್ ಸಮಿತಿಯೂ ಸಹ ಹೆಚ್ಚು, ಹೆಚ್ಚು ಮತ ದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಸಂತೋಷ್, ಸಂಪತ್, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್, ನಗರಸಭೆ ಕಂದಾಯಾಧಿಕಾರಿ ಲಿಂಗರಾಜು, ತಿಪ್ಪೇಸ್ವಾಮಿ ಮುಂತಾದವರು ಇದ್ದರು.

Share this article