ಕನ್ನಡಪ್ರಭ ವಾರ್ತೆ ವಿಜಯಪುರ:ಎಲೆಕ್ಟ್ರಾನಿಕ್ ಉಪಕರಣಗಳ ಬಹು ಬಳಕೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ಮಕ್ಕಳ ಮನೋಸ್ಥಿತಿ ದಯನೀಯ ಸ್ಥಿತಿಯಲ್ಲಿದ್ದು, ಅವುಗಳಿಂದ ಆದಷ್ಟು ದೂರ ಇರುವ ಕುರಿತು ಪಾಲಕರು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಕನ್ನೂರ ಶಾಂತಿ ಕುಟೀರದ ಸಾಧಕ ಶ್ರೀಕೃಷ್ಣ ಸಂಪಗಾಂವಕರ ಕರೆ ನೀಡಿದರು.
ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ಎಸ್ಆರ್ಡಿ ಇಂಟಿಗ್ರಿಟಿ ವಿಜಿನರಿ ಟ್ರಸ್ಟ್ ಸಂಚಾಲಿತ ಫ್ಲೈಂಯಿಂಗ್ ಕ್ರಸ್ಟಲ್ ಕೋಚಿಂಗ್ ಕ್ಲಾಸಿಸ್ನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಾಲಕರಾದವರು ಮೊದಲು ತಾವು ಸ್ವತಃ ಮೊಬೈಲ್, ಇಂಟರ್ನೆಟ್ ನಂತಹ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕಿದೆ. ಮಕ್ಕಳಿಗೆ ನಮ್ಮ ಸನಾತನ ಸಂಸ್ಕೃತಿಯನ್ನು ಕಲಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.ನಾಲ್ಕು ಮತ್ತು ಐದನೆಯ ತರಗತಿ ವಿದ್ಯಾರ್ಥಿಗಳಿಗೆ ನವೋದಯ ಸೈನಿಕ ಶಾಲೆ ಹಾಗೂ ಆರ್ಎಂಎಸ್ ಕಿತ್ತೂರ ಶಾಲೆಗಳ ಪ್ರವೇಶಾತಿಗಾಗಿ ತರಬೇತಿ ಹಾಗೂ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದು ಖುಷಿ ವಿಚಾರ ಎಂದರು.
ಅತಿಥಿಯಾಗಿದ್ದ ಬಿಎಲ್ಡಿಇ ಪಾಲಿಟೆಕ್ನಿಕ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಎಸ್.ಜೆ.ಗೌಡರ ಮಾತನಾಡಿದರು. ಇನ್ನೋರ್ವ ಅತಿಥಿ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರೀಯತೆ ನೈತಿಕ ಮೌಲ್ಯಗಳ ಬೆಳೆಸುವುದು ಇಂದಿನ ತುರ್ತು ಅಗತ್ಯತೆಯಾಗಿದೆ ಎಂದರು.ಬಿಎಲ್ಡಿಇ ಸಂಸ್ಥೆಯ ಬಿಸಿನೆಸ್ ಮ್ಯಾನೆಜ್ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮುರಗೇಶ ಪಟ್ಟಣಶಟ್ಟಿ ಮಾತನಾಡಿದರು.
ಫ್ಲೈಂಯಿಂಗ್ ಕ್ರಸ್ಟಲ್ ಕೋಚಿಂಗ್ ಕ್ಲಾಸಿಸ್ನ ಉಪಾಧ್ಯಕ್ಷೆ ಜ್ಯೋತಿ ದೇಸಾಯಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶ್ರೀ ಭಾಗ್ಯವಂತಿ ಮಲ್ಟಿ ಸ್ಪೆಷಿಯಾಲಿಟಿ ಆಸ್ಪತ್ರೆಯ ಡಾ.ನಚಿಕೇತ ದೇಸಾಯಿ, ಶಿಕ್ಷಕರು, ಪಾಲಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.