ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಅಶೋಕ ನಗರದಲ್ಲಿರುವ ಜೈ ಕರ್ನಾಟಕ ಸಭಾಂಗಣದಲ್ಲಿ ಜೈ ಕರ್ನಾಟಕ ಪರಿಷತ್ತು ಮಂಡ್ಯ ಶಾಖೆಯಿಂದ ಆಯೋಜಿಸಿದ್ದ ಮೈಸೂರು ಮಹಾ ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ೧೬೦ನೇ ಜಯಂತ್ಯುತ್ಸವದ ಅಂಗವಾಗಿ ಕೆಂಪನಂಜಮ್ಮಣ್ಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಾಮರಾಜೇಂದ್ರ ಒಡೆಯರ್ ಪತ್ನಿ ಕೆಂಪನಂಜಮ್ಮಣ್ಣಿ. ಒಡೆಯರ್ ಅವರು ಆಕಸ್ಮಿಕ ಕಾಯಿಲೆಗೆ ತುತ್ತಾದಾಗ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಇನ್ನೂ ಚಿಕ್ಕವರಾಗಿದ್ದರು. ಆದ ಕಾರಣ ಕೆಂಪನಂಜಮ್ಮಣ್ಣಿ ಅವರು ೧೮೯೫ರಿಂದ ೧೯೦೨ವರೆಗೆ ಮೈಸೂರು ಸಂಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. ಇಂಗ್ಲಿಷ್, ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿದ್ದ ಕೆಂಪನಂಜಮ್ಮಣ್ಣಿ ದೂರದೃಷ್ಟಿಯ ರಾಜಾಡಳಿತಕ್ಕೆ ಬುನಾದಿ ಹಾಕಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ-ಜನಪ್ರಿಯ ಆಡಳಿತಕ್ಕೆ ಆಸರೆಯಾದರು ಎಂದು ಸ್ಮರಿಸಿದರು.ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ೩೭೨ ಎಕರೆ ಭೂಮಿ ಮತ್ತು ಅಪಾರ ಧನ ಸಹಾಯ ನೀಡಿದರು. ಇವರ ಕಾಲದಲ್ಲಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಕೃಷ್ಣರಾಜಸಾಗರ ಅಣೆಕಟ್ಟೆ ಕಟ್ಟುವ ವೇಳೆ ಆರ್ಥಿಕ ಸಮಸ್ಯೆ ಎದುರಾದಾಗ ತಮ್ಮ ಬಳಿ ಇದ್ದ ಹಾಗೂ ಅರಮನೆಯ ಚಿನ್ನಾಭರಣವನ್ನೆಲ್ಲಾ ಒತ್ತೆ ಇಟ್ಟು ಅಣೆಕಟ್ಟು ಪೂರ್ಣಗೊಳ್ಳುವುದಕ್ಕೆ ನೆರವಾಗಿದ್ದನ್ನು ಎಂದಿಗೂ ಮರೆಯಲಾಗದು ಎಂದರು.
ವಿದ್ಯುತ್ ಯೋಜನೆಯಿಂದ ಮಂಡ್ಯ ಇಂಡಿಯಾಕ್ಕೆ ಪರಿಚಯವಾಯಿತು, ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯಾದ ಶಿವನಸಮುದ್ರ ಯೋಜನೆ ಇವರ ಕಾಲದಲ್ಲಿಯೇ ಕಾರ್ಯರೂಪಕ್ಕೆ ಬಂದಿತು ಎಂದರು.
ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಟಿ.ಟಿ.ಅನುಸೂಯ ಹೊಂಬಾಳೆ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದ ಮುಖ್ಯಸ್ಥೆ ಕೆ.ಪಿ.ಅರುಣಕುಮಾರಿ ಅವರಿಗೆ ರಾಜಮಾತೆ ಕೆಂಪನಂಜಮ್ಮಣ್ಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.