ದೇವನಹಳ್ಳಿ: ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ದೇವನಹಳ್ಳಿಯ ಆವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಪುರಜ್ಯೋತಿ ಕೊಂಡೊಯ್ಯುತ್ತಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
ಕೆಂಪೇಗೌಡರು ಕರುನಾಡು ಕಂಡ ಅಪ್ರತಿಮ ದೂರದೃಷ್ಟಿ ನಾಯಕರು. ಸುಮಾರು ೫೦೦ ವರ್ಷಗಳ ಹಿಂದೆ ಬೆಂಗಳೂರು ನಿರ್ಮಾಣ ರಾಜ್ಯಕ್ಕೆ ಅವರು ಕೊಟ್ಟ ಬಹುದೊಡ್ಡ ಕೊಡುಗೆ. ಇಂದಿನ ಬೆಂಗಳೂರು ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಜತೆಗೆ ಎಲ್ಲ ವರ್ಗದ ಜನರು ಬದುಕು ಕಟ್ಟಿಕೊಳ್ಳುವ ಕೇಂದ್ರವಾಗಿದೆ ಎಂದು ಹೇಳಿದರು.
ಅವತಿಯಲ್ಲಿ ಕೆಂಪೇಗೌಡ ವಂಶಸ್ಥರು ನೆಲೆಸಿದ ನಾಡು, ಇಲ್ಲಿಂದ ಜ್ಯೋತಿ ರಥಯಾತ್ರೆಯು ಬೆಂಗಳೂರಿನ ಕೆಂಗೇರಿ ಬಳಿಯ ಕೆಂಪೇಗೌಡ ಬಡಾವಣೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸೇರಲಿದೆ. ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಕೆಂಪೇಗೌಡರ ಪುರಜ್ಯೋತಿಗಳು ಬರಲಿದೆ. ಇದು ರಾಜ್ಯದ ಭಾವೈಕ್ಯತೆ ಸಂಕೇತ ಎಂದರು.ಕಾರ್ಯಕ್ರಮದಲ್ಲಿ ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ, ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ, ಜಿಪಂ ಸಿಇಒ ಡಾ. ವಾಸಂತಿ ಅಮರ್, ಇಒ ಮುನಿರಾಜು, ವಕ್ಕಲಿಗ ಸಂಘದ ಜೋನ್ನಹಳ್ಳಿ ಮುನಿರಾಜು, ಕೆ.ಸಿ ಮಂಜುನಾಥ್, ಮುನೇಗೌಡ, ಚಂದ್ರಶೇಖರ್, ಪ್ರಸನ್ನಕುಮರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪುರಜ್ಯೋತಿ ರಥಯಾತ್ರೆಗೆ ಚನ್ನಕೇಶವ ದೇವಾಲಯದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.