ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಾಷ್ಟ್ರಕವಿ ಕುವೆಂಪು ಆಶಯದ ಸರ್ವ ಜನಾಂಗದ ಶಾಂತಿಯ ತೋಟದ ಪರಿಕಲ್ಪನೆಯ ಸಮಾಜವನ್ನು 500 ವರ್ಷಗಳ ಹಿಂದೆಯೇ ನಿರ್ಮಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, ಸರ್ವ ಸಮುದಾಯಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿ ದೃಷ್ಟಿಯಿಂದ ಬೆಂಗಳೂರು ನಗರ ನಿರ್ಮಿಸಿದ ಕೆಂಪೇಗೌಡರು ಜನಪರ ಆಡಳಿತಕ್ಕೆ ಮಾದರಿ ಎಂದರು.
ವಿಜಯನಗರ ಅರಸರ ಸಾಮಂತರಾಗಿದ್ದರೂ ಸ್ವತಂತ್ರವಾಗಿ ಜನಪರವಾಗಿ ಯೋಜಿಸಿದ್ದ ಕೆಂಪೇಗೌಡರ ಪೂರ್ವಜರು ಮೂಲತಃ ತಮಿಳುನಾಡಿನ ಕಂಚಿ ಭಾಗದಿಂದ ಕರ್ನಾಟಕಕ್ಕೆ ಬಂದು ಸುಮಾರು 350 ವರ್ಷಗಳ ಕಾಲ ಮಾಗಡಿ ಹಾಗೂ ಯಲಹಂಕ ಪ್ರಾಂತ್ಯವನ್ನು ದಕ್ಷತೆಯಿಂದ ಆಳ್ವಿಕೆ ನಡೆಸಿದರು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಕೆಂಪೇಗೌಡರು ಕೇವಲ ಪಾಳಯಗಾರರಲ್ಲ. ಬದಲಾಗಿ ಅವರೊಬ್ಬ ಚಿಂತಕರು ಹಾಗೂ ದಾರ್ಶನಿಕರಾಗಿ ಇಂದಿನ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿ ಎಂದರು.
ಹಾಸನದ ಡಾ:ಎಂ.ಬಿ.ಇರ್ಷಾದ್, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಜಾತ್ಯಾತೀತವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ವಿವಿಧ ಜನಪದ ಕಲಾ ತಂಡಗಳ ನೃತ್ಯ ಪ್ರದರ್ಶನದೊಂದಿಗೆ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಅಲಂಕೃತ ವಾಹನದ ಮೂಲಕ ಮೆರವಣಿಗೆಯ ಮೂಲಕ ತಾಲೂಕು ಆಡಳಿತ ಸೌಧದ ಆವರಣಕ್ಕೆ ತರಲಾಯಿತು. ಮೆರವಣಿಗೆಯುದ್ದಕ್ಕೂ ತಮಟೆ ಸದ್ದಿಗೆ ಶಾಸಕ ಎಚ್ .ಟಿ. ಮಂಜು ತಮ್ಮ ಬೆಂಬಲಿಗರ ಜೊತೆಗೂಡಿ ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಎಸ್.ಎಲ್.ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ನಂಜಪ್ಪ, ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಧನಂಜಯ, ಬಿಜೆಪಿ ಮುಖಂಡ ಶೀಳನೆರೆ ಭರತ್, ಒಕ್ಕಲಿಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಬಿ.ಎಸ್.ಸತೀಶ್, ಬಿಇಒ ಆರ್.ಎಸ್.ಸೀತಾರಾಂ ಹಲವರು ಭಾಗವಹಿಸಿದ್ದರು.