ಕನ್ನಡಪ್ರಭ ವಾರ್ತೆ ನೆಲಮಂಗಲ
ನೆಲಮಂಗಲದ ತಾಲೂಕು ಕಚೇರಿ ಮುಂದೆ ಒಕ್ಕಲಿಗರ ಯುವ ವೇದಿಕೆ ಸ್ಥಾಪಿಸಿರುವ ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯನವರ ಸರಳತೆ, ಪ್ರಾಮಾಣಿಕತೆ ಹಾಗೂ ನಾಡಿನ ಏಳಿಗೆಗಾಗಿ ಶ್ರಮಿಸಿದ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ವಿರೋಧಗಳ ನಡುವೆಯೂ ಕರ್ನಾಟಕ ಏಕೀಕರಣದ ಕನಸು ನನಸು ಮಾಡಿದ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ನಿರ್ಮಿಸಿದ ಕೆಂಗಲ್ ಹನುಮಂತಯ್ಯ ಎಂದಿಗೂ ಜನಮನದಲ್ಲಿ ನೆಲೆಸಿದ್ದಾರೆ. ಅವರನ್ನು ಕೆಳಗಿಳಿಸಿದವರು ಮರೆಯಾಗಿ ಹೋದರು. ಇಂದಿರಾಗಾಂಧಿಯವರ ಜತೆ ಕೆಲಸ ಮಾಡಿದ್ದಲ್ಲದೆ, ಕೆಲಸವಾಗಬೇಕು ಎಂದಾಗ ಪ್ರಧಾನಿಗಳನ್ನು ನೇರವಾಗಿ ಪ್ರಶ್ನೆ ಮಾಡುತ್ತಿದ್ದವರು. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಒಕ್ಕಲಿಗ ಯುವ ವೇದಿಕೆ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ. ಇದು ರಾಜ್ಯದಲ್ಲಿಯೇ ಅತಿ ಎತ್ತರದ ಕೆಂಗಲ್ ಹನುಮಂತಯ್ಯ ಪ್ರತಿಮೆಯಾಗಿದೆ ಎಂದು ಪ್ರಶಂಶಿಸಿದರು.
ಪೌರಾಡಳಿತ ಸಚಿವ ಬಾಲಕೃಷ್ಣ ಮಾತನಾಡಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ನಿರ್ಮಾಣ ಮಾಡದಿದ್ದರೆ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ರಾಜಧಾನಿಯನ್ನು ನೋಡಬೇಕಾಗಿತ್ತು. ಅವರ ಹೋರಾಟಗಳು, ಸಮಾಜಕ್ಕೆ ನೀಡಿದ ಕೊಡುಗೆಗಳು ಸರ್ವಕಾಳಕ್ಕೂ ಮಾದರಿಯಾಗಿದೆ. ಕೆಂಗಲ್ ಹನುಮಂತಯ್ಯನವರ ಆದರ್ಶಗಳಲ್ಲಿಯೇ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಗುತ್ತಿದ್ದಾರೆ. ಟೀಕೆಗಳು ಎಷ್ಟೇ ಬಂದರೂ ನಾವು ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂಬ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗರು ಒಕ್ಕಲಿಗ ನಾಯಕನಿಗೆ ಪ್ರತಿಮೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.ಶಾಸಕ ಶ್ರೀನಿವಾಸ್ ಮಾತನಾಡಿ, ಕೆಂಗಲ್ ಹನುಮಂತಯ್ಯನವರು ದೇಶ ಕಂಡ ಅಪರೂಪದ ರಾಜಕಾರಣಿ. ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುವ ಮಹಾನ್ನಾಯಕರು. ದೂರದೃಷ್ಟಿ ಹೊಂದಿದ್ದ ನಾಯಕ ಇಡೀ ವಿಶ್ವವೇ ಮೆಚ್ಚುವ ಆಡಳಿತ ಸೌಧವನ್ನು ನಿರ್ಮಿಸಿದರು. ಕೆಂಗಲ್ ಹನುಮಂತಯ್ಯ ಇಲ್ಲದಿದ್ದರೆ ವಿಧಾನಸೌಧ ಇರುತ್ತಿರಲಿಲ್ಲ. ವಿಧಾನಸೌಧ ಇಲ್ಲದಿದ್ದರೆ ಬೆಂಗಳೂರಿಗೆ ಗೌರವ ಇರುತ್ತಿರಲಿಲ್ಲ. ಸತ್ಯವೇ ಕೆಲಸ, ಕರ್ತವ್ಯವೇ ದೇವರು ಎಂಬ ಸಂದೇಶ ಸಾರಿದ ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರರಾಗಿದ್ದರು. ರಾಜಕಾರಣದಲ್ಲಿ ನಮಗೆಲ್ಲಾ ಅವರ ಆದರ್ಶಗಳು ಮಾದರಿ ಎಂದು ಹೇಳಿದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವದೂತಸ್ವಾಮೀಜಿ ಮಾತನಾಡಿ, ಕೆಂಗಲ್ ಹನುಮಂತಯ್ಯ ವಿಧಾನಸೌಧ ನಿರ್ಮಿಸಿದರು. ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಿಸಿದರು, ಎಚ್.ಡಿ.ಕುಮಾರಸ್ವಾಮಿ ಸುವರ್ಣಸೌಧ ನಿರ್ಮಿಸಿದರು, ಕ್ರಿಯಾಶೀಲ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ವಿಧಾನಸೌಧದ ಸಮೀಪವೇ ಎಲ್ಲಾ ಇಲಾಖೆಗಳು ಒಂದೇ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ಭವ್ಯ ಕರ್ತವ್ಯ ಸೌಧ ನಿರ್ಮಿಸಬೇಕು. ಕೆಂಗಲ್ ಹನುಮಂತಯ್ಯನವರ ಆದರ್ಶ ಎಲ್ಲಾ ರಾಜಕಾರಣಿಗಳು ಅನುಸರಿಸಬೇಕು ಎಂದು ಹೇಳಿದರು.