ಅರಕಲಗೂಡು ಅಂಚಿನ ಗ್ರಾಮ । 4 ತಾಲೂಕು, 40ಕ್ಕೂ ಹೆಚ್ಚು ದೇವಸ್ಥಾನ । ತಾಲೂಕಲ್ಲಿ ಹೆಚ್ಚು ಮತದಾರರ ಗ್ರಾಮ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮವು ಅರಕಲಗೂಡು ತಾಲೂಕಿನ ಅಂಚಿನ ಗ್ರಾಮವಾಗಿದ್ದು ೪ ತಾಲೂಕುಗಳ ಸಂಗಮ ಸ್ಥಳವಾಗಿದೆ. ಕಾವೇರಿ ನದಿಯ ಎಡದಂಡೆಯ ಮೇಲೆ ಕೇಂದ್ರೀಕೃತವಾದ ಈ ಗ್ರಾಮದಲ್ಲಿ ಸುಮಾರು ೪೦ಕ್ಕೂ ಹೆಚ್ಚು ದೇವಸ್ಥಾನಗಳಿದ್ದು, ಗ್ರಾಮವು ಸಾಮರಸ್ಯದ ನೆಲೆಯಾಗಿದೆ.ಕೇರಳಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು ೩ ಸಾವಿರ ಮನೆಗಳಿದ್ದು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾತದಾರರನ್ನು ಹೊಂದಿರುವ ಗ್ರಾಮಗಳಲ್ಲಿ ಒಂದಾಗಿದೆ. ಸುಮಾರು ೧೬ ಜನ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಯಾಗಿದೆ. 2023ರ ಆಗಸ್ಟ್ 2 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜ್ಯೋತಿ ಕುಮಾರ್ ಆಯ್ಕೆಯಾದರು. ಈ ಅವಧಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ಅವಿರತವಾಗಿ ಗ್ರಾಮ ಪಂಚಾಯಿತಿಯಲ್ಲಿ ಸಾಗಿ ಗ್ರಾಮವು ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿದೆ. ಕ್ಷೇತ್ರದ ಶಾಸಕ ಎ.ಮಂಜು ಸಹಕಾರದಿಂದ ಗ್ರಾಮದಲ್ಲಿ ಅನೇಕ ಅಭಿವೃದ್ದಿ ಕಾರ್ಯದಿಂದ ಕೇರಳಾಪುರ ಗ್ರಾಮವು ಮಾದರಿ ಗ್ರಾಮವಾಗಿ ಮಾರ್ಪಡುತ್ತಿದೆ.
ಈ ಹಿಂದೆಯೇ ಗ್ರಾಮ ಪಂಚಾಯಿತಿಯಿಂದ ಕೃಷಿಪತ್ತಿನ ಸಹಕಾರಿ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ನೀಡಲಾಗಿದೆ. ಗ್ರಾಮದ ಸ್ವಚ್ಛತೆ, ನೀರು ಸರಬರಾಜು, ಬೀದಿ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಎಲ್ಲಾ ಅಭಿವೃದ್ದಿ ಕಾರ್ಯಗಳಲ್ಲಿ ಕ್ಷೇತ್ರದ ಶಾಸಕ ಎ.ಮಂಜುರವರ ಸಹಕಾರ ಮತ್ತು ಮಾರ್ಗದರ್ಶನದಿಂದ ಗ್ರಾಮವು ಪ್ರಗತಿ ಪಥದತ್ತ ಮುನ್ನಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜ್ಯೋತಿ ಕುಮಾರ್ ತಿಳಿಸಿದ್ದಾರೆ.